ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಬಿಜೆಪಿ ಶಾಸಕ ರಾಜಾ ಸಿಂಗ್ ಗೆ ದಂಡ ವಿಧಿಸಿದ ಕೋರ್ಟ್
ಹೈದರಾಬಾದ್: ಹೈದರಾಬಾದ್ನ ಹಿಂದಿನ ಡಿಸಿಪಿ ಪಶ್ಚಿಮ ವಲಯ ಅವರ ಮೇಲಿನ ದಾಳಿಗೆ ಸಂಬಂಧಿಸಿದ ಕೊಲೆಯತ್ನ ಪ್ರಕರಣದಲ್ಲಿ ಖುಲಾಸೆಗೊಂಡ ಮರುದಿನವೇ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು 2015ರಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ಹೈದರಾಬಾದ್ನ ಮಂಗಲ್ಹಟ್ ಎಂಬಲ್ಲಿ ಘಟನೆ ನಡೆದಿತ್ತು.
ಸಂಸದ, ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ನಂಪಳ್ಳಿಯ ವಿಶೇಷ ಸೆಷನ್ಸ್ ನ್ಯಾಯಾಲಯ ಈ ಪ್ರಕರಣದಲ್ಲಿ ರಾಜಾ ಸಿಂಗ್ ಮತ್ತು ಆರು ಮಂದಿ ಇತರರನ್ನು ದೋಷಿ ಎಂದು ಘೋಷಿಸಿ ಅವರು ತಲಾ ರೂ 6500 ದಂಡ ಪಾವತಿಸಬೇಕೆಂದು ಸೂಚಿಸಿದೆ.
ಮೇ 2015ರಲ್ಲಿ ಮಂಗಲ್ಹಟ್ ಪ್ರದೇಶದಲ್ಲಿ ರಾತ್ರಿ ಸಮಯ ವಿವಾಹ ಸಂಬಂಧಿತ ಮೆರವಣಿಗೆ ಸಾಗುತ್ತಿದ್ದಾಗ ಡಿಜೆ ಸಂಗೀತ ಜೋರಾಗಿ ಅಬ್ಬರಿಸುತ್ತಿತ್ತು. ಈ ಸಂದರ್ಭ ಪೊಲೀಸರು ಸಂಗೀತ ನಿಲ್ಲಿಸುವಂತೆ ಹಾಗೂ ಅದಕ್ಕೆ ಇಲ್ಲಿ ನಿಷೇಧವಿದೆಯೆಂದು ಹೇಳಿದರೂ ಅಲ್ಲಿ ದೊಡ್ಡ ಜಗಳವೇ ನಡೆದಿತ್ತು. ಕೊನೆಗೆ ಸಂಘಟಕರು ತಮ್ಮ ಸ್ಥಳೀಯ ಶಾಸಕರಾದ ರಾಜಾ ಸಿಂಗ್ ಅವರನ್ನು ಕರೆಸಿದ್ದರು. ಈ ಸಂದರ್ಭ ಶಾಸಕ ಮತ್ತು ಪೊಲೀಸರ ನಡುವೆ ಜಗಳ ನಡೆದು ಅವರು ಹಾಗೂ ಇನ್ನು ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಾಗಿತ್ತು.