ಉತ್ತರಪ್ರದೇಶ ರೈತರ ಹತ್ಯೆ:ಕೇಂದ್ರ ಸಚಿವರ ಪುತ್ರ, ಇತರರ ವಿರುದ್ಧ 5,000 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ಲಕ್ನೊ: ಕೃಷಿ ಕಾನೂನು ವಿರೋಧಿ ಪ್ರತಿಭಟನೆಯ ವೇಳೆ ಎಂಟು ಮಂದಿ ಸಾವನ್ನಪ್ಪಿದ ಲಖಿಂಪುರ ಖೇರಿ ಘಟನೆಯ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡವು ಸ್ಥಳೀಯ ನ್ಯಾಯಾಲಯಕ್ಕೆ 5,000 ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಿದೆ.
ವಿಶೇಷ ತನಿಖಾ ತಂಡ ಅಥವಾ ಎಸ್ಐಟಿಯಿಂದ ಚಾರ್ಜ್ಶೀಟ್ನ ಸಾವಿರಾರು ಹಾಳೆಗಳನ್ನು ಇಂದು ಬೆಳಿಗ್ಗೆ ಲಾಕ್ ಮಾಡಲಾಗಿರುವ ಎರಡು ದೊಡ್ಡ ಟ್ರಂಕ್ನಲ್ಲಿ ಲಖಿಂಪುರ ಖೇರಿಯಲ್ಲಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತರಲಾಯಿತು.
"ಹೌದು, ಆರೋಪಪಟ್ಟಿ ಸಲ್ಲಿಸಲಾಗಿದೆ" ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ. ಯಾದವ್ ಲಖಿಂಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಹಾಗೂ ಪತ್ರಕರ್ತರನ್ನು ಹತ್ಯೆಗೈದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದರು.
ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದ ಎಸ್ಯುವಿ ನಾಲ್ವರು ರೈತರು ಹಾಗೂ ಪತ್ರಕರ್ತನ ಮೇಲೆ ಹರಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮೂವರು ಸಾವನ್ನಪ್ಪಿದ್ದರು.