ಹರಿದ್ವಾರ ಧರ್ಮ ಸಂಸದ್ ನ ಭಾಷಣಕಾರರನ್ನು ಬಂಧಿಸುವಂತೆ ಎನ್ಆರ್ ಐ ಸಂಘಟನೆಗಳ ಆಗ್ರಹ
ಹೊಸದಿಲ್ಲಿ, ಜ. 9: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನ ಸಂದರ್ಭ ಭಾರತೀಯ ಮುಸ್ಲಿಮರ ನರಮೇಧ ನಡೆಸುವಂತೆ ಕರೆ ನೀಡಿದ್ದ ಭಾಷಣಕಾರರನ್ನು ಬಂಧಿಸಲು ನರೇಂದ್ರ ಮೋದಿ ನೇತೃತ್ವದ ಸರಕಾರ ವಿಫಲವಾಗಿರುವ ಕುರಿತು ಅನಿವಾಸಿ ಭಾರತೀಯರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ ಅಲ್ಲದೆ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿವೆ.
ದ್ವೇಷ ಭಾಷಣ ಖಂಡಿಸಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ನೆದರ್ಲ್ಯಾಂಡ್, ಜರ್ಮನಿ, ಸ್ಕಾಟ್ಲ್ಯಾಂಡ್, ಫಿನ್ಲ್ಯಾಂಡ್ ಹಾಗೂ ನ್ಯೂಝಿಲ್ಯಾಂಡ್ ನ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ ಸಮುದಾಯಗಳನ್ನು ಪ್ರತಿನಿಧಿಸುವ ಭಾರತೀಯ ಸಂಘಟನೆಗಳು ಜನವರಿ 8ರಂದು #StopIndianMulsimGenocide ಹ್ಯಾಷ್ ಟ್ಯಾಗ್ ನಡಿ ಮಾಡಿರುವ ಟ್ವೀಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.
ಭಾರತದಲ್ಲಿ ಮುಸ್ಲಿಮರ ವಿರುದ್ಧದ ನರಮೇಧದ ಕರೆಯ ಹಿನ್ನೆಲೆಯಲ್ಲಿ ಹೊಣೆ ಹೊತ್ತುಕೊಳ್ಳುವಂತೆ ಸಂಸತ್ತಿಗೆ ಪತ್ರ ರವಾನೆ, ಜಾಗತಿಕ ಸಹಿ ಅಭಿಯಾನದ ಒಂದು ಭಾಗವಾಗಿ ಈ ಜಾಗತಿ ಟ್ವಟ್ಟರ್ ಅಭಿಯಾನ ಕೈಗೊಳ್ಳಲಾಗಿದೆ. ಈ ಜಾಗತಿಕ ಆನ್ಲೈನ್ ಅಭಿಯಾನದಲ್ಲಿ ಕೈ ಜೋಡಿಸಿದವರಲ್ಲಿ ಚಿಂತಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾದ ಔದ್ರೆ ಟ್ರಸ್ಚ್ಕೆ, ಜಾನ್ ಕಸಕ್, ರಾಣಾ ಆಯೂಬ್, ಟಿ.ಎಂ. ಕೃಷ್ಣ, ಸ್ವರ ಭಾಸ್ಕರ್, ಅಹ್ಮದ್ ಖಾನ್, ದಾರಬ್ ಫಾರೂಕಿ, ನಂದಿನಿ ಸುಂದರ್, ರುಚಿರಾ ಗುಪ್ತಾ, ಆನಂದ್ ಪಟವರ್ಧನ್, ಪರಂಜೋಯ್ ಗುಹಾ ಥಕುರ್ತಾ, ಒನಿರ್ ಅಮಿನಾ ಕೌಶರ್ ಹಾಗೂ ಇತರ ಹಲವರು ಸೇರಿದ್ದಾರೆ.