ಉತ್ತರ ಪ್ರದೇಶದಲ್ಲಿ "80 ವರ್ಸಸ್ 20 ಹೋರಾಟ" ಎಂದ ಆದಿತ್ಯನಾಥ್
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (PTI)
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 80 ಹಾಗೂ 20ರ ನಡುವಿನ ಹೋರಾಟ ಎಂದು ಹೇಳಿಕೆ ನೀಡಿದ್ದಾರೆ.
ಲಕ್ನೋದಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆದಿತ್ಯನಾಥ್ ಅವರಿಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತಗಳ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
"ಸ್ಪರ್ಧೆ ಮತ್ತಷ್ಟು ಮುಂದೆ ಸಾಗಿದೆ. ಅದು ಈಗ 80 ವರ್ಸಸ್ 20" ಎಂದು ಅವರು ಹೇಳಿದರು.
"ಉವೈಸಿ 19 ಶೇ. ಎಂದು ಹೇಳುತ್ತಿದ್ದಾರೆ" ಎಂದು ಆ್ಯಂಕರ್ ಹೇಳಿದಾಗ ಪ್ರತಿಕ್ರಿಯಿಸಿದ ಆದಿತ್ಯನಾಥ್ "ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುವವರು ಶೇ. 80ರಷ್ಟು ಮಂದಿ. ಇಂತಹ ಜನರು ಬಿಜೆಪಿಗೆ ಮತ ಚಲಾಯಿಸುತ್ತಾರೆ ಹಾಗೂ ಇದರ ವಿರುದ್ಧ ಇರುವವರು ಮಾಫಿಯಾ, ಕ್ರಿಮಿನಲ್ಗಳ ಬೆಂಬಲಿಗರು, ರೈತ ವಿರೋಧಿ, ಶೇ. 15-20 ಮಂದಿ ಬೇರೆ ಹಾದಿ ಹಿಡಿಯಬಹುದು. ಆದುದರಿಂದ ಇದು 80-20 ಹೋರಾಟವಾಗಿದೆ. ಬಿಜೆಪಿ ಮುಂದೆ ಸಾಗಲಿದೆ" ಎಂದು ಆದಿತ್ಯನಾಥ್ ಹೇಳಿದರು.