ಜಾರ್ಖಂಡ್: ಮಾಟಗಾತಿಯೆಂದು ಆರೋಪಿಸಿ ವೃದ್ಧೆಯ ಹತ್ಯೆಗೆ ಯತ್ನ
ಸಾಂದರ್ಭಿಕ ಚಿತ್ರ
ರಾಂಚಿ (ಜಾರ್ಖಂಡ್), ಜ. 13: ಇಲ್ಲಿನ ಸಿಮಡೇಗ ಸಮೀಪದ ಗ್ರಾಮದಲ್ಲಿ ಮಾಟಗಾತಿಯೆಂಬ ಆರೋಪದಲ್ಲಿ ವೃದ್ಧೆಯೋರ್ವರನ್ನು ಜೀವಂತವಾಗಿ ದಹಿಸಲು ಯತ್ನಿಸಿದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಜನರು ಮಾಟಗಾತಿ ಎಂದು ಆರೋಪಿಸಿ ವೃದ್ಧೆಗೆ ಥಳಿಸಿ, ಅವರನ್ನು ಹುಲ್ಲಿನ ಬಣವೆಗೆ ದೂಡಿ ಹಾಕಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಬೊಬ್ಬೆ ಕೇಳಿ ಅಲ್ಲಿಗೆ ಆಗಮಿಸಿದ ಇತರ ಗ್ರಾಮ ನಿವಾಸಿಗಳು ವೃದ್ಧೆಯನ್ನು ರಕ್ಷಿಸಿದ್ದಾರೆ.
ಈ ಘಟನೆ ಥೇಥೈಟಂಗಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ಪಾನಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ವೃದ್ಧೆಯನ್ನು ಝರಿಯೋ ದೇವಿ ಎಂದು ಗುರುತಿಸಲಾಗಿದೆ. ಫ್ಲೋರೆನ್ಸ್ ಡುಂಗುಡುಂಗ್ ಎಂಬವರ ಪತ್ನಿ ಮೃತಪಟ್ಟ ಬಳಿಕ ಆಯೋಜಿಸಲಾದ ಅನ್ನ ಸಂತರ್ಪಣೆಗೆ ಝಾರಿಯೊ ದೇವಿಯನ್ನು ಆಹ್ವಾನಿಸಲಾಗಿತ್ತು. ಆದರೆ, ಝರಿಯೊ ದೇವಿ ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭ ಮಹಿಳೆಯರ ಸಾವಿಗೆ ಝರಿಯೊ ದೇವಿಯೇ ಕಾರಣ ಎಂದು ಅವರು ಆರೋಪಿಸಿದ್ದರು.
‘‘ಫ್ಲೋರೇನ್ಸ್ ಡುಂಗ್ಡುಂಗ್ ಅವರ ಪತ್ನಿ ಸಾವನ್ನಪ್ಪಿದ ಬಳಿಕದ ಅನ್ನಸಂತರ್ಪಣೆಗೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿಗೆ ತೆರಳಿದಾಗ ಆತನ ಪತ್ನಿಯನ್ನು ತಾನು ಮಾಟ ಮಾಡಿ ಹತ್ಯೆಗೈದಿರುವುದಾಗಿ ಆರೋಪ ಹೊರಿಸಿ ಥಳಿಸಿದರು, ಹತ್ಯೆಗೆ ಯತ್ನಿಸಿದರು’’ ಎಂದು ಝಾರಿಯೊ ದೇವಿ ಹೇಳಿದ್ದಾರೆ.