‘ಕಾನೂನುಬಾಹಿರ’ ಫತ್ವಾ ಆರೋಪ: ದಾರುಲ್ ಉಲೂಮ್ ದೇವ್ ಬಂದ್ ವಿರುದ್ಧ ತನಿಖೆಗೆ ಎನ್ಸಿಪಿಸಿಆರ್ ಸೂಚನೆ
ಹೊಸದಿಲ್ಲಿ, ಜ.16: ಇಸ್ಲಾಮಿ ಧಾರ್ಮಿಕ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದೇವ್ ಬಂದ್ ಜಾಲತಾಣದಲ್ಲಿ ‘ಕಾನೂನುಬಾಹಿರ ಹಾಗೂ ದಾರಿತಪ್ಪಿಸುವ ’ ಫತ್ವಾಗಳನ್ನು ಪ್ರಕಟಿಸಲಾಗುತ್ತಿದೆಎಯಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್ಸಿಪಿಸಿಆರ್) ಉತ್ತರಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ.
ಆಕ್ಷೇಪಕಾರಿ ವಿಷಯಗಳನ್ನು ತೆಗೆದುಹಾಕುವ ತನಕ ದಾರುಲ್ ಉಲೂಮ್ ದೇವ್ ಬಂದ್ ವೆಬ್ ಸೈಟ್ ನ ಪ್ರಸಾರಕ್ಕೆ ತಡೆ ವಿಧಿಸುವಂತೆ ಎನ್ಸಿಪಿಸಿಆರ್ ಶನಿವಾರ ರಾಜ್ಯ ಸರಕಾರಕ್ಕೆ ತಿಳಿಸಿದೆ.
ಎನ್ಸಿಪಿಸಿಆರ್ನ ನಡೆಗೆ ಪ್ರತಿಕ್ರಿಯಿಸಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ, ಕೆಲವೇ ಕೆಲವು ಫತ್ವಾಗಳನ್ನು ನೆಪಮಾಡಿಕೊಂಡು ಹಾಗೂ ಅವುಗಳನ್ನು ಅತಿರಂಜಿತಗೊಳಿಸುವ ಮೂಲಕ ಮದ್ರಸಾಗಳನ್ನು ಗುರಿಯಿಡುವ ಇನ್ನೊಂದು ಪ್ರಯತ್ನ ಇದಾಗಿದೆಯೆಂದು ಖಂಡಿಸಿದೆ.
ದಾರುಲ್ ಉಲೂಮ್ ದೇವ್ ಬಂದ್ ಜಾಲತಾಣದಲ್ಲಿ ಪ್ರಕಟಿಸಲಾಗಿರುವ ಕೆಲವು ಫತ್ವಾಗಳು ದೇಶದ ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆಯೆಂದು ಆರೋಪಿಸಿ ದೂರೊಂದು ಬಂದಿರುವ ಹಿನ್ನೆಲೆಯಲ್ಲಿ ತಾನು ಈ ಕ್ರಮ ಕೈಗೊಂಡಿರುವುದಾಗಿ ಎನ್ಸಿಪಿಸಿಆರ್ ತಿಳಿಸಿದೆ.