ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡದ ಆರೋಪ: ಸಿಖ್ ಭಕ್ತಾದಿಗಳ ಮೇಲೆ ಗುಂಪು ದಾಳಿ
ಭೋಜ್ಪುರ್: ದೇವಸ್ಥಾನ ನಿರ್ಮಾಣಕ್ಕೆ ದಾನ ಮಾಡಿಲ್ಲ ಎಂಬ ಆರೋಪದ ಮೇಲೆ ಸಿಖ್ ಭಕ್ತಾದಿಗಳ ಮೇಲೆ ಗುಂಪು ದಾಳಿ ನಡೆಸಿದೆ. ರವಿವಾರ ಬಿಹಾರದ ಭೋಜ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಆರು ಮಂದಿ ತೀವ್ರ ಗಾಯಗೊಂಡಿರುವುದಾಗಿ ndtv.com ವರದಿ ಮಾಡಿದೆ.
ಸಂತ್ರಸ್ತರು ಬಿಹಾರದ ಪಾಟ್ನಾದಿಂದ ಟ್ರಕ್ನಲ್ಲಿ ಪಂಜಾಬ್ ನ ಮೊಹಾಲಿಗೆ ಹೊರಟಿದ್ದರು ಎಂದು ಪೊಲೀಸ್ ಅಧಿಕಾರಿ ರಾಹುಲ್ ಸಿಂಗ್ ತಿಳಿಸಿದ್ದಾರೆ.
ಪಾಟ್ನಾದಿಂದ ಮೊಹಾಲಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ಆರು ಸಿಖ್ ಭಕ್ತರು ಭಾನುವಾರ ಭೋಜ್ಪುರದ ಚಾರ್ಪೋಖಾರಿಯಲ್ಲಿ ಧಾರ್ಮಿಕ ಆಚರಣೆ ಮತ್ತು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡದಿದ್ದಕ್ಕಾಗಿ ಅವರ ವಾಹನಕ್ಕೆ ಗುಂಪೊಂದು ಕಲ್ಲು ತೂರಾಟ ನಡೆಸಿದಾಗ ಗಾಯಗೊಂಡಿದ್ದಾರೆ ಎಂದು ರಾಹುಲ್ ಸಿಂಗ್ ತಿಳಿಸಿರುವುದಾಗಿ the.wire ವರದಿ ಮಾಡಿದೆ.
ಗಾಯಾಳುಗಳನ್ನು ಚಾರ್ಪೋಖಾರಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಐದು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. "ಕೇಳಿದ ಹಣವನ್ನು ಪಾವತಿಸಲು ನಿರಾಕರಿಸಿದ್ದಕ್ಕಾಗಿ ಜನಸಮೂಹವು ನಮ್ಮ ಮೇಲೆ ದಾಳಿ ಮಾಡಿದಾಗ ಕನಿಷ್ಠ ಆರರಿಂದ ಏಳು ಜನರು ಗಾಯಗೊಂಡರು" ಎಂದು ಟ್ರಕ್ನಲ್ಲಿದ್ದ ಭಕ್ತರೊಬ್ಬರು ಹೇಳಿದರು, ದಾಳಿ ನಡೆದಾಗ ಟ್ರಕ್ನಲ್ಲಿ 58 ಜನರಿದ್ದರು.