ಪ್ರಧಾನಿ ಭದ್ರತಾ ಲೋಪ ಪ್ರಕರಣ: ಖಲಿಸ್ತಾನಿಗಳು ಬೆದರಿಕೆ ಕರೆ ಮಾಡಿದ್ದಾರೆಂದು ಆರೋಪಿಸಿದ ಸುಪ್ರೀಂಕೋರ್ಟ್ ವಕೀಲರು
ಹೊಸದಿಲ್ಲಿ, ಜ. 17: ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಲ್ಲಿ ಪಂಜಾಬ್ ಗೆ ಭೇಟಿ ನೀಡಿದ್ದ ಸಂದರ್ಭ ಸಂಭವಿಸಿದ ಭದ್ರತಾ ಲೋಪ ಪ್ರಕರಣದ ಕುರಿತಂತೆ ಒಂದು ವಾರದಲ್ಲಿ ಎರಡನೇ ಬಾರಿ ಖಲಿಸ್ತಾನ ಪರ ಗುಂಪು ಸಿಕ್ಖ್ ಫಾರ್ ಜಸ್ಟಿಸ್ನಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ನ ಹಲವರು ವಕೀಲರು ಸೋಮವಾರ ಹೇಳಿದ್ದಾರೆ.
‘‘ಮೊದಲಾಗಿ ನಾವು ನ್ಯಾಯವಾದಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ವಿವಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಖ್ಖರ ನಡುವೆ ಇತ್ತು. ಆದರೆ, ನೀವು ಜಸ್ಟಿಕ್ ಫಾರ್ ಸಿಕ್ಖ್ (ಎಸ್ಎಫ್ಜೆ) ವಿರುದ್ಧ ದೂರು ದಾಖಲಿಸಿದಿರಿ ಹಾಗೂ ನಿಮ್ಮನ್ನು ಅಪಾಯದ ಸ್ಥಾನದಲ್ಲಿ ಇರಿಸಿದ್ದೀರಿ. ಈಗ ನಾವು ಮುಸ್ಲಿಂ ವಿರೋಧಿ ಹಾಗೂ ಸಿಕ್ಖ್ ವಿರೋಧಿ ಸುಪ್ರೀಂ ಕೋರ್ಟ್ ನ್ಯಾಯವಾದಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ’’ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ.
ಈ ಕರೆಗಳು ‘‘ನಾವು ಜನವರಿ 26 (ಗಣರಾಜ್ಯೋತ್ಸವ) ರಂದು ಪ್ರಧಾನಿ ಅವರನ್ನು ನಿರ್ಬಂಧಿಸಲಿದ್ದೇವೆ’’ ಹಾಗೂ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪವನ್ನು ತನಿಖೆ ನಡೆಸಲು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಕೂಡ ಒಳಗೊಂಡಿದೆ.
ಪಂಜಾಬ್ನ ಫಿರೋಝ್ಪುರ ಜಿಲ್ಲೆಯ ಫ್ಲೈ ಓವರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ವ್ಯೆಹ 20 ನಿಮಿಷಗಳ ಕಾಲ ಸಿಲುಕಿಕೊಂಡ ಪ್ರಕರಣದ ಸ್ವತಂತ್ರ ತನಿಖೆಯ ನೇತೃತ್ವವನ್ನು ನ್ಯಾಯಮೂರ್ತಿ ಮಲ್ಹೋತ್ರ (ನಿವೃತ್ತ) ಅವರ ವಹಿಸಿದ್ದಾರೆ.
ಕಳೆದ ವಾರ ಕರೆ ಮಾಡಿದ ವ್ಯಕ್ತಿ ಸಿಕ್ಖ್ ರೈತರನ್ನು ಶಿಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವು ನೀಡಬಾರದು ಎಂದು ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿದ್ದನು. ಕರೆ ಮಾಡಿದಾತ 1984ರ ಸಿಕ್ಖ್ ವಿರೋಧಿ ಗಲಭೆೆಯನ್ನು ಉಲ್ಲೇಖಿಸಿದ್ದನು ಹಾಗೂ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ಸಂದರ್ಭ ಮೃತಪಟ್ಟ ಸಿಕ್ಖ್ ರೈತರ ಬಗ್ಗೆ ನ್ಯಾಯಾಲಯ ಮೌನವಾಗಿದೆ ಎಂದು ಆತ ಆರೋಪಿಸಿದ್ದನು.
ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ವ್ಯೂಹಕ್ಕೆ ಭದ್ರತಾ ಲೋಪ ಉಂಟಾಗಿರುವ ಕುರಿತ ವಿಚಾರಣೆಯಿಂದ ದೂರ ಇರುವಂತೆ ನಿರ್ದಿಷ್ಟವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲಿ ಕರೆದಾರರು ಸೂಚಿಸಿದ್ದಾರೆ ಎಂದು ಉತ್ತರಪ್ರದೇಶ ಸರಕಾರದ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.