ಜಿಂದಾಲ್ ಉಕ್ಕು ಸ್ಥಾವರ ಸ್ಥಾಪನೆಗೆ ಜಮೀನು ಹಸ್ತಾಂತರ ವಿರೋಧಿಸಿ ಒಡಿಶಾ ಗ್ರಾಮಸ್ಥರ ಪ್ರತಿಭಟನೆ
ಪೊಲೀಸರಿಂದ ಬಲಪ್ರಯೋಗ, ಬಂಧನ, ಹಲವರಿಗೆ ಗಾಯ
Photo: Thewire.in
ಹೊಸದಿಲ್ಲಿ: ಒಡಿಶಾದ ಜಗತ್ಸಿಂಗ್ಪುರ್ ಜಿಲ್ಲೆಯ ಎರಸಮ ತೆಹ್ಸಿಲ್ನ ಢಿಂಕಿಯಾ ಗ್ರಾಮದ ನಿವಾಸಿಗಳು ಕಳೆದೆರಡು ತಿಂಗಳುಗಳಿಂದ ಅಲ್ಲಿನ ಜಿಂದಾಲ್ ಸ್ಟೀಲ್ ವರ್ಕ್ಸ್ ಸಂಸ್ಥೆಯ ಪ್ರಸ್ತಾವಿತ ಉಕ್ಕಿನ ಸ್ಥಾವರ ಹಾಗೂ ಸಿಮೆಂಟ್ ಘಟಕಕ್ಕೆ ಜಮೀನು ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ರೂ 65,000 ಕೋಟಿ ಯೋಜನೆಗೆ ಇಲ್ಲಿನ 1,173.58 ಹೆಕ್ಟೇರ್ ಜಮೀನು ವರ್ಗಾವಣೆಗೆ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ಒಟ್ಟು 13.2 ಮಿಲಿಟನ್ ಟನ್ ಸಾಮಥ್ರ್ಯದ ಉಕ್ಕು ಸ್ಥಾವರ, 900 ಮೆವಾ ಸಾಮರ್ಥ್ಯದ ವಿದ್ಯುತ್ ಸ್ಥಾವರ ಹಾಗೂ 10ಎಂಟಿಪಿಎ ಸಾಮರ್ಥ್ಯದ ಸಿಮೆಂಟ್ ಮಿಕ್ಸಿಂಗ್ ಘಟಕವನ್ನು ಇಲ್ಲಿ ಜಿಂದಾಲ್ ಕಂಪೆನಿಗೆ ಸ್ಥಾಪಿಸುವ ಉದ್ದೇಶವಿದೆ.
ಆದರೆ ಈ ಯೋಜನೆಗಳಿಗೆ ಜಮೀನು ಪಡೆದಲ್ಲಿ 40,000ಕ್ಕೂ ಅಧಿಕ ಗ್ರಾಮಸ್ಥರ ಜೀವನೋಪಾಯಕ್ಕೆ ಕೊಡಲಿಯೇಟು ಬೀಳಲಿದೆ ಎಂದು ಆರೋಪಿಸಲಾಗಿದೆ. ಢಿಂಕಿಯಾ ಹೊರತಾಗಿ ನುವಾಗಾವೊನ್ ಮತ್ತು ಗಡಕುಜಂಗ್ ಗ್ರಾಮಗಳ ಜನರೂ ಈ ಯೋಜನೆಯಿಂದ ಬಾಧಿತರಾಗಲಿದ್ದಾರೆ.
ಜನವರಿ 14 ರಂದು 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಸ್ಥಳೀಯರ ಮೇಲೆ ಲಾಠಿಚಾರ್ಜ್ ನಡೆಸಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಹಾಗೂ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡದಿದಾರೆ.
ಇದೀಗ ಪೊಲೀಸ್ ಬಲಪ್ರಯೋಗದಿಂದ ಭೀತಿಗೊಳಗಾದ ಗ್ರಾಮಸ್ಥರು ಜೀವಭಯದಿಂದ ಗ್ರಾಮವನ್ನು ತೊರೆಯುತ್ತಿದ್ದಾರೆ. ಪೊಲೀಸ್ ಕಾರ್ಯಾಚರಣೆಯ ನಂತರ 17 ಮಂದಿಯನ್ನು ಬಂಧಿಸಲಾಗಿದೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಬಂಧನಕ್ಕೊಳಗಾದವರಲ್ಲಿ ಹೋರಾಟಗಾರ ದೇಬೇಂದ್ರ ಸ್ವಾಯಿನ್ ಕೂಡ ಇದ್ದು ಅವರನ್ನು ಪೊಲೀಶರು ಕಸ್ಟಡಿಯಲ್ಲಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅವರನ್ನು ಬಂಧಿಸುವಾಗ ಉಂಟಾದ ನೂಕುನುಗ್ಗಲಿನ ಸಂದರ್ಭ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಗ್ರಾಮಗಳು ಈ ಹಿಂದೆ ಪೊಸ್ಕೊ ಉಕ್ಕು ಸ್ಥಾವರದ ವಿರುದ್ಧವೂ ದೀರ್ಘ ಹೋರಾಟ ನಡೆಸಿದ್ದವು.
Photo: Thewire.in