ಮಹಿಳೆಯೊಂದಿಗೆ ಬಸ್ ನಲ್ಲಿ ಪ್ರಯಾಣಿಸಿದ್ದಕ್ಕಾಗಿ ಹಲ್ಲೆಗೊಳಗಾಗಿದ್ದ ಯುವಕನ ಮೇಲೆ ʼಮತಾಂತರ ತಡೆʼ ಕಾಯ್ದೆಯಡಿ ಕೇಸ್
ಭೋಪಾಲ್: ಉಜ್ಜಯನಿಯಲ್ಲಿ ಹಿಂದು ಮಹಿಳೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಕಾರಣಕ್ಕೆ ಹಲ್ಲೆಗೊಳಗಾಗಿದ್ದ 26 ವರ್ಷದ ಮುಸ್ಲಿಂ ಯುವಕನ ಮೇಲೆ ಕೆಲವರು ಹಲ್ಲೆಗೈದ ಘಟನೆಯ ಹತ್ತು ದಿನಗಳ ನಂತರ ಸಂತ್ರಸ್ತ ಯುವಕನ ಮೇಲೆ ಪೊಲೀಸರು ಮಧ್ಯಪ್ರದೇಶದ ಮತಾಂತರ ನಿಗ್ರಹ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ ಎಂದು Hindustantimes.com ವರದಿ ಮಾಡಿದೆ.
ಆರೋಪಿ ಇಂದೋರ್ ನಿವಾಸಿ ಆಸಿಫ್ ಶೇಖ್ ಮೇಲೆ 25 ವರ್ಷದ ಯುವತಿಗೆ ವಿವಾಹವಾಗಲು ಬಲವಂತಪಡಿಸಿದ ಹಾಗೂ ಆಕೆಯಿಂದ ಬಲವಂತದಿಂದ ಹಣ ವಸೂಲಿ ಮಾಡಿದ ಆರೋಪ ಹೊರಿಸಲಾಗಿದೆ.
ಯುವತಿ ನೀಡಿದ ದೂರಿನಲ್ಲಿ ಆರೋಪಿ ಆಸಿಫ್ ತನ್ನ ಪತಿಯ ಸ್ನೇಹಿತನೆಂಬ ಕಾರಣಕ್ಕೆ ಮನೆಗೆ ಬರುತ್ತಿದ್ದ ಹಾಗೂ ಕೆಲ ತಿಂಗಳ ಹಿಂದೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದಿದ್ದು ಹಾಗೂ ಅದನ್ನು ಮುಂದಿಟ್ಟುಕೊಂಡು ತನ್ನ ಮಾನಹಾನಿಗೈಯ್ಯುವ ಬೆದರಿಕೆಯೊಡ್ಡಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ದೂರಿದ್ದಾಳೆ. ಮತಾಂತರಗೊಂಡು ತನ್ನನ್ನು ವಿವಾಹವಾಗುವಂತೆಯೂ ಆತ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ತನ್ನನ್ನು ಬಲವಂತವಾಗಿ ಆಜ್ಮೀರ್ ಗೆ ಕರೆದೊಯ್ಯುತ್ತಿದ್ದಾಗ ಕೆಲ ಜನರು ತಡೆದಿದ್ದರು ಎಂದು ಆಕೆ ಹೇಳಿದ್ದಾಳಲ್ಲದೆ ಭಯದಿಂದ ಆಗ ದೂರು ನೀಡಿರಲಿಲ್ಲ ಎಂದಿದ್ದಾಳೆ.
ಘಟನೆ ಜನವರಿ 14ರಂದು ನಡೆದಿದ್ದು ಯುವಕನನ್ನು ಉಜ್ಜಯನಿ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಹೊರಗೆಳೆದು ವಿವಾಹಿತ ಹಾಗೂ ಮಗುವೊಂದರ ತಾಯಿಯಾಗಿರುವ ಮಹಿಳೆಯನ್ನು ದಾರಿ ತಪ್ಪಿಸಿದ ಆರೋಪ ಹೊರಿಸಿ ಹಲ್ಲೆಗೈಯ್ಯಲಾಗಿತ್ತು.