"ಆದಿತ್ಯನಾಥ್ ಅಯೋಧ್ಯೆಯಿಂದ ಸ್ಫರ್ಧಿಸದಿರುವುದು ಒಳ್ಳೆಯದಾಯಿತು, ಸ್ಫರ್ಧಿಸಿದ್ದರೆ...": ರಾಮಮಂದಿರ ಮುಖ್ಯ ಅರ್ಚಕ
Photo: ANI
ಅಯೋಧ್ಯೆ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರು ಅಯೋಧ್ಯೆ ಕ್ಷೇತ್ರದಿಂದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಒಳ್ಳೆಯದು ಎಂದು ಇಲ್ಲಿನ ರಾಮ ಮಂದಿರದ ಪ್ರಧಾನ ಅರ್ಚಕರು ಸೋಮವಾರ ಹೇಳಿದ್ದಾರೆ. ಒಂದು ವೇಳೆ ಇಲ್ಲಿಂದ ಸ್ಫರ್ಧಿಸಿದ್ದಿದ್ದರೆ ಅವರು ಸಾಕಷ್ಟು ವಿರೋಧವನ್ನು ಎದುರಿಸಬೇಕಾಗಿತ್ತು ಎಂದೂ ಅವರು ಹೇಳಿಕೆ ನೀಡಿದ್ದಾಗಿ theprint.in ವರದಿ ಮಾಡಿದೆ.
ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಅಯೋಧ್ಯೆಯಲ್ಲಿ ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸಿರುವ ಬಗ್ಗೆ ಜನರು ಆದಿತ್ಯನಾಥ್ ಅವರನ್ನು ವಿರೋಧಿಸಿದ್ದರಿಂದ ಅವರು ಅಯೋಧ್ಯೆಯ ಬದಲು ಗೋರಖ್ಪುರದಿಂದ ಸ್ಪರ್ಧಿಸಬೇಕು ಎಂದು ನಾನು ಈ ಹಿಂದೆ ಸಲಹೆ ನೀಡಿದ್ದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದರು.
“ಮುಖ್ಯಮಂತ್ರಿ ಆದಿತ್ಯನಾಥ್ ಇಲ್ಲಿಂದ ಸ್ಪರ್ಧಿಸದಿರುವುದು ಒಳ್ಳೆಯದು. ನಾನು ಅದನ್ನು ಮೊದಲೇ ಸೂಚಿಸಿದ್ದೆ ಮತ್ತು ಅವರು ಗೋರಖ್ಪುರದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದು ಉತ್ತಮ ಎಂದು ಸಲಹೆ ನೀಡಿದ್ದೆ, ” ಎಂದು ರಾಮಮಂದಿರದ ತಾತ್ಕಾಲಿಕ ರಾಮ್ ಲಲ್ಲಾ ದೇವಸ್ಥಾನದ ಮುಖ್ಯ ಅರ್ಚಕ ದಾಸ್ ಹೇಳಿದರು.
ಇಲ್ಲಿನ ಹಿಂದೂ ದಾರ್ಶನಿಕರು ಹಲವು ಭಿನ್ನಾಭಿಪ್ರಾಯ ಹೊಂದಿದ್ದಾರೆ ಮತ್ತು ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮ ಮಾಡಿರುವ ಕುರಿತು ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು 84 ವರ್ಷದ ಅರ್ಚಕ ಹೇಳಿದರು. "ಅವರು ಇಲ್ಲಿಂದ ಗೆಲ್ಲುತ್ತಿದ್ದರು ಆದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿತ್ತು" ಎಂದು ಅವರು ಹೇಳಿದರು.
ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಕಣಕ್ಕೆ ಇಳಿಯುತ್ತಾರೆ ಎಂದು ರಾಜಕೀಯ ವಲಯಗಳಲ್ಲಿ ಬಲವಾದ ವದಂತಿಗಳು ಇತ್ತು ಆದರೆ ಬಿಜೆಪಿ ನಾಯಕತ್ವವು ಅವರನ್ನು ಗೋರಖ್ಪುರ (ನಗರ) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ.
ಅಯೋಧ್ಯೆಯಲ್ಲಿ ಚುನಾವಣಾ ವಾತಾವರಣದ ಬಗ್ಗೆ ಮಾತನಾಡಿದ ಆಚಾರ್ಯ ಸತ್ಯೇಂದ್ರ ದಾಸ್, "ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸದ ಕಾರಣ ಇನ್ನೂ ವಾತಾವರಣದ ಕುರಿತು ಸ್ಪಷ್ಟವಾಗಿಲ್ಲ" ಎಂದು ಹೇಳಿದರು. ಆದಾಗ್ಯೂ, ಆಡಳಿತಾರೂಢ ಬಿಜೆಪಿಯು ರಾಮಮಂದಿರದ ವಿಷಯವನ್ನು ಬಿಡುವುದಿಲ್ಲ ಮತ್ತು ಅದು ಅವರ ಕಾರ್ಯಸೂಚಿಯಲ್ಲಿ ಉಳಿಯುತ್ತದೆ ಎಂದು ಅರ್ಚಕರು ಹೇಳಿದರು.