1971ರಲ್ಲಿ ಮುಖ್ಯಮಂತ್ರಿಯೇ ಚುನಾವಣೆಯಲ್ಲಿ ಸೋತಿದ್ದರು: ಆದಿತ್ಯನಾಥ್ ಗೆ ನೆನಪಿಸಿದ ಚಂದ್ರಶೇಖರ್ ಆಝಾದ್
ಹೊಸದಿಲ್ಲಿ, ಜ. 27: 1971ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಗೋರಖ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ ಆಗಿನ ಮುಖ್ಯಮಂತ್ರಿ ಟಿ.ಎನ್. ಸೋತ ಇತಿಹಾಸವನ್ನು ಜನರು ಪುನರಾವರ್ತಿಸಲಿದ್ದಾರೆ ಎಂದು ಆಝಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಅಝಾದ್ ಹೇಳಿದ್ದಾರೆ.
36 ಸಣ್ಣ ಪಕ್ಷಗಳ ಮೈತ್ರಿಕೂಟ ‘ಸಾಮಾಜಿಕ ಪರಿವರ್ತನ ಮೋರ್ಚಾ’ದ ಮುಖ್ಯಸ್ಥರಾಗಿರುವ, ಅಲ್ಲದೆ, ಉತ್ತರಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಮೈತ್ರಿ ಕೂಟದ ಅಭ್ಯರ್ಥಿ ಎಂದು ಸ್ವತಃ ಘೋಷಿಸಿಕೊಂಡಿರುವ ಚಂದ್ರಶೇಖರ್ ಅಝಾದ್, ಜಯ ತನಗೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.
‘‘ನಾವು ಗೋರಖ್ಪುರದ 1971ರ ಚರಿತ್ರೆಗೆ ಹಿಂದಿರುಗುವ ಅಗತ್ಯತೆ ಇದೆ. 1971ರಲ್ಲಿ ನಡೆದ ಚುನಾವಣೆಯಲ್ಲಿ ಗೋರಖ್ಪುರದಲ್ಲಿ ಸ್ಪರ್ಧಿಸಿದ್ದ ಆಗಿನ ಮುಖ್ಯಮಂತ್ರಿ ಟಿ.ಎನ್. ಸಿಂಗ್ ಅವರನ್ನು ಮತದಾರರು ಸೋಲಿಸಿದ್ದರು. ಅದೇ ರೀತಿ ಆದಿತ್ಯನಾಥ್ ಕೂಡ ಈಗ ಮುಖ್ಯಮಂತ್ರಿ. ಕಳೆದ 5 ವರ್ಷಗಳಲ್ಲಿ ಉತ್ತರಪ್ರದೇಶ ಹಾಗೂ ಗೋರಖ್ಪುರ ಧ್ವಂಸವಾಗಿರುವುದಕ್ಕೆ ಆದಿತ್ಯನಾಥ್ ಅವರೇ ಜವಾಬ್ದಾರಿ’’ ಎಂದು ಅವರು ಹೇಳಿದರು. ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾತುಕತೆ ವಿಫಲವಾದ ಬಳಿಕ ಅಝಾದ್ ಸಮಾಜ ಪಾರ್ಟಿ (ಎಎಸ್ಪಿ) ಉತ್ತಮವಾಗಿ ಸ್ಪಂದಿಸದ ದೊಡ್ಡ ಪಕ್ಷಗಳು ಹಾಗೂ ಸ್ಥಾಪಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿತು. ಅಲ್ಲದೆ, ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿತು ಎಂದು ಅವರು ಹೇಳಿದ್ದಾರೆ.
‘‘ಬಿಜೆಪಿಯ ವಿರುದ್ಧದ ಪ್ರತಿಪಕ್ಷಗಳ ಮತ ವಿಭಜನೆಯಾಗುವುದನ್ನು ತಪ್ಪಿಸಲು ನಾನು ಮೈತ್ರಿ (ಎಸ್ಪಿಯೊಂದಿಗೆ) ಮಾಡಿಕೊಳ್ಳಲು ಬಯಸಿದ್ದೆ. ಆದರೆ, ಅವರು ನಮ್ಮ ಪಾಲು ನೀಡಲು ಬಯಸದೇ ಇದ್ದಾಗ ನಾವು ನಿರಾಕರಿಸಿದೆವು’’ ಎಂದು ಅಝಾದ್ ಅವರು ಹೇಳಿದ್ದಾರೆ.
‘‘ಎಸ್ಪಿ ತನ್ನ ಕೆಲಸ ಮಾಡುತ್ತಿದೆ ಎಂದು ನಾನು ಹೇಳುತ್ತಿದ್ದೇನೆ. ನಾವು ಕೂಡ ಕೆಲಸ ಮಾಡುತ್ತಿದ್ದೇವೆ. ಎಸ್ಪಿಯೊಂದಿಗೆ ನಮಗೆ ಯಾವುದೇ ಮನಸ್ತಾಪ ಇಲ್ಲ’’ ಎಂದು ಆಝಾದ್ ಚಂದ್ರಶೇಖರ್ ಹೇಳಿದ್ದಾರೆ.