ಪಂಜಾಬ್ ನಲ್ಲಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳೆಂಬ ವದಂತಿ ನಿರಾಕರಿಸಿದ ಕಾಂಗ್ರೆಸ್
ಚಂಡೀಗಢ/ಹೊಸದಿಲ್ಲಿ: ಪಂಜಾಬ್ನಲ್ಲಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ ಎಂಬ ವದಂತಿಯನ್ನು ಕಾಂಗ್ರೆಸ್ ಶನಿವಾರ ನಿರಾಕರಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಬ್ಬರ ಹೆಸರನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ತೀವ್ರ ಪೈಪೋಟಿಯ ನಡುವೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹಾಗೂ ಹಾಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಇಬ್ಬರಿಗೂ ಅವಕಾಶ ಕಲ್ಪಿಸಲು ರವಿವಾರ ಲೂಧಿಯಾನದಲ್ಲಿ ರಾಹುಲ್ ಗಾಂಧಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಲಿದ್ದಾರೆ ಎಂಬ ಸುದ್ದಿ ಇತ್ತು.
ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಚನ್ನಿ ಅವರ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಒಂದು ದಿನದ ನಂತರ ಇಂತಹ ಸುದ್ದಿ ಹರಡುತ್ತಿರುವುದು ಗಮನಾರ್ಹವಾಗಿದೆ.
ಸಿಎಂ ಹುದ್ದೆಗೆ ಚನ್ನಿ ಮುಂಚೂಣಿಯಲ್ಲಿರುವಂತೆ ತೋರುತ್ತಿರುವುದರಿಂದ ಗೊಂದಲಕ್ಕೊಳಗಾದ ಸಿಧು ತಮ್ಮದೇ ಪಕ್ಷದ ಮೇಲೆ ವಾಗ್ದಾಳಿಯನ್ನು ಹೆಚ್ಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸಿಧು ಶುಕ್ರವಾರ ತಮ್ಮ ಪ್ರತಿಸ್ಪರ್ಧಿ ಚರಣ್ ಜಿತ್ ಸಿಂಗ್ ಚನ್ನಿ ಅವರ ಮೇಲೆ ನೇರ ದಾಳಿ ನಡೆಸಿದ್ದರು ಮತ್ತು ಪಕ್ಷವು "ಪ್ರಾಮಾಣಿಕ ಮತ್ತು ಶುದ್ಧ ದಾಖಲೆ ಹೊಂದಿರುವ" ಯಾರನ್ನಾದರೂ ಆಯ್ಕೆ ಮಾಡಬೇಕು ಎಂದು ಹೇಳಿದ್ದರು.
ಚನ್ನಿ ಅವರನ್ನು ಸಿಎಂ ಹುದ್ದೆಗೆ ಒಲವು ತೋರಲಾಗಿದೆ ಎಂದು ಕಾಂಗ್ರೆಸ್ ಇತ್ತೀಚೆಗೆ ಹಲವಾರು ಸೂಚನೆಗಳನ್ನು ನೀಡಿದೆ. ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಕರೆಗಳ ಮೂಲಕ ಇದು ಸಾರ್ವಜನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಇದು ರಾಜ್ಯದ ಜನರು ಸಿಎಂ ಹುದ್ದೆಗೆ ಯಾರಿಗೆ ಒಲವು ತೋರುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಈ ಸಮೀಕ್ಷೆಯಲ್ಲೂ ಚನ್ನಿ ಮುಂಚೂಣಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.