22 ಸಾವಿರ ಕೋ.ರೂ. ಸಾಲ ವಂಚನೆ ಪ್ರಕರಣ: ಎಬಿಜಿ ಶಿಪ್ಯಾರ್ಡ್ ವಿರುದ್ಧ ಇ.ಡಿ.ಯಿಂದ ತನಿಖೆ ಆರಂಭ
ಹೊಸದಿಲ್ಲಿ, ಫೆ. 16: ಗುಜರಾತ್ ಮೂಲದ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆ ಆರಂಭಿಸಲು ಜಾರಿ ನಿರ್ದೇಶನಾಲಯ ಈಗ ಸಿದ್ಧತೆ ನಡೆಸುತ್ತಿದೆ.
22,000 ಕೋಟಿ ರೂಪಾಯಿ ಸಾಲ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ದೇಶದಿಂದ ಪರಾರಿಯಾಗದಂತೆ ತಡೆಯಲು ಕಂಪೆನಿಯ ಸಿಎಂಡಿ ರಿಷಿ ಅಗರ್ವಾಲ್ ಸೇರಿದಂತೆ ಆರೋಪಿಗಳ ವಿರುದ್ಧ ಸಿಬಿಐ ಲುಕೌಟ್ ಸರ್ಕ್ಯುಲರ್ ಜಾರಿ ಮಾಡಿದೆ. ಈ ನಡುವೆ ಹಣ ಅಕ್ರಮ ವರ್ಗಾವಣೆಯ ಜಾಡು ಹಿಡಿಯಲು ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಪರೋಕ್ಷ ರೀತಿಯಲ್ಲಿ ಹಣ ಸಾಗಾಟ ಮಾಡಿರುವ ಬಗ್ಗೆ ಸ್ಪಷ್ಟ ಪುರಾವೆಗಳು ಇರುವುದರಿಂದ ಇದು ಜಾರಿ ನಿರ್ದೇಶನಾಲಯದ ತನಿಖೆಗೆ ಸೂಕ್ತ ಪ್ರಕರಣವಾಗಿದೆ. ಪ್ರಕರಣದ ದಾಖಲೆಗಳನ್ನು ಕೂಲಕಂಷವಾಗಿ ಪರಿಶೀಲಿಸಲಾಗುತ್ತಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಅಡಿಯಲ್ಲಿ ಶೀಘ್ರದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಾರಿ ನಿದೇಶರ್ನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.