ಕರ್ನಾಟಕ ಹಿಜಾಬ್ ವಿವಾದದ ಮಾಸ್ಟರ್ ಮೈಂಡ್ ʼಅಖಿಲೇಶ್ ಯಾದವ್ʼ ಎಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಲಕ್ನೋ: ಕರ್ನಾಟಕದ ಹಿಜಾಬ್ ವಿವಾದ ಈಗಾಗಲೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸುದ್ದಿ ಮಾಡಿರುವ ನಡುವೆಯೇ ಹಲವು ರಾಜಕೀಯ ನಾಯಕರು ತಮ್ಮದೇ ಆದ ಧಾಟಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಮಾಸ್ಟರ್ ಮೈಂಡ್ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಗಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯನ್ನು ಕೋಮು ಧ್ರುವೀಕರಿಸುವ ಸಲುವಾಗಿ ಸಮಾಜವಾದಿ ಪಕ್ಷ ಈ ಪ್ರತಿಭಟನೆಗಳನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಏಳು ಹಂತಗಳಲ್ಲಿ ಉತ್ತರಪ್ರದೇಶ ಚುನಾವಣೆಗಳು ನಡೆಯುತ್ತಿದ್ದು, ಮಾರ್ಚ್ ೧೦ರಂದು ಫಲಿತಾಂಶ ಪ್ರಕಟವಾಗಲಿದೆ.
"ಅಖಿಲೇಶ್ ಯಾದವ್ ಗೆ ಬೆಂಬಲ ನೀಡಲು ಅವರ ತಂದೆಯೂ ನಿರಾಕರಿಸಿದ್ದಾರೆ. ಒಂದು ವೇಳೆ ಅಖಿಲೇಶ್ ನೇತೃತ್ವದ ಸರಕಾರವೇನಾದರೂ ಆಡಳಿತಕ್ಕೆ ಬಂದರೆ ಅವರು ಒಂದು ಸಮುದಾಯದ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ. ಈಗ ನಡೆಯುತ್ತಿರುವ ಹಿಜಾಬ್ ಪ್ರಕರಣದಲ್ಲಿ ಅಖಿಲೇಶ್ ಯಾದವ್ ಮಾಸ್ಟರ್ ಮೈಂಡ್" ಎಂದು ಅವರು ಹೇಳಿದ್ದಾರೆ.