ಬಿಹಾರದಲ್ಲಿ ರೈಲಿಗೆ ಬೆಂಕಿ: ರೈಲ್ವೆಯಿಂದ ಉನ್ನತ ಮಟ್ಟದ ತನಿಖೆ
ಮಧುಬನಿ (ಬಿಹಾರ್), ಫೆ. 19: ಬಿಹಾರದ ಮಧುಬನಿ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಶನಿವಾರ ಬೆಂಕಿ ಹತ್ತಿಕೊಂಡ ಬಳಿಕ ಪೂರ್ವ ಕೇಂದ್ರ ರೈಲ್ವೆ (ಇಸಿಆರ್), ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಪೂರ್ವ ಕೇಂದ್ರ ರೈಲ್ವೆಯ ಹೇಳಿಕೆಯ ಪ್ರಕಾರ, ಶನಿವಾರ ಬೆಳಗ್ಗೆ 9.13ಕ್ಕೆ ರೈಲಿಗೆ ಬೆಂಕಿ ಹತ್ತಿಕೊಂಡಿದೆ. 9.50ಕ್ಕೆ ಬೆಂಕಿ ನಂದಿಸಲಾಯಿತು. ಜಯನಗರದಿಂದ ಹೊಸದಿಲ್ಲಿ ನಡುವೆ ಸಂಚರಿಸುವ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಈ ದುರಂತ ಸಂಭವಿಸಿದೆ. ರೈಲಿನ ಐದು ಬೋಗಿಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಅನಂತರ ರೈಲ್ವೆ, ರೈಲಿನ ಕೇವಲ ಒಂದು ಬೋಗಿಗೆ ಮಾತ್ರ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಿದೆ. ದುರಂತದಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಪೂರ್ವ ಕೇಂದ್ರ ರೈಲ್ವೆಯ ಹೇಳಿಕೆ ತಿಳಿಸಿದೆ.
Next Story