ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹೇಳಿಕೆಗೆ ಈಶ್ವರಪ್ಪಗೆ ಛೀಮಾರಿ ಹಾಕಲಾಗಿದೆ: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ
ಹೊಸದಿಲ್ಲಿ: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸಚಿವ ಈಶ್ವರಪ್ಪ, "ಒಂದು ದಿನ ಕೆಂಪುಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, "ಅವರ ಹೇಳಿಕೆಗಾಗಿ ಅವರಿಗೆ ಛಿಮಾರಿ ಹಾಕಲಾಗಿದೆ" ಎಂದಿದ್ದಾಗಿ indiatoday.in ವರದಿ ಮಾಡಿದೆ.
"ನಾನು ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡಿ, ಅವರ ಕೇಸರಿ ಧ್ವಜ ಹೇಳಿಕೆಗೆ ಛೀಮಾರಿ ಹಾಕಿದ್ದೇನೆ" ಎಂದು ಇಂಡಿಯಾ ಟುಡೆ ಸುದ್ದಿ ನಿರ್ದೇಶಕ ರಾಹುಲ್ ಕನ್ವಾಲ್ ಅವರ ವಿಶೇಷ ಸಂದರ್ಶನದಲ್ಲಿ ನಡ್ಡಾ ಹೇಳಿದ್ದಾರೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು "ಮುಂದಿನ ದಿನದಲ್ಲಿ ಕೆಂಪು ಕೋಟೆಯ ಮೇಲಿರುವ ರಾಷ್ಟ್ರಧ್ವಜವನ್ನು ಕೇಸರಿ ಧ್ವಜವು ಬದಲಾಯಿಸಬಹುದು ಎಂದು ಹೇಳಿ ಭಾರೀ ವಿವಾದವನ್ನು ಹುಟ್ಟುಹಾಕಿದ್ದರು. ಸಚಿವರ ರಾಜೀನಾಮೆಗೆ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದ್ದು, ರಾಷ್ಟ್ರಧ್ವಜದ ಬಗ್ಗೆ ಅವರು ಮಾಡಿದ ಹೇಳಿಕೆಗಾಗಿ ದೇಶದ್ರೋಹದ ಆರೋಪದ ಮೇಲೆ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿತ್ತು.
ತಮ್ಮ ಹೇಳಿಕೆಯ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯಿಸಿದ್ದು, ಕರ್ನಾಟಕ ವಿಧಾನಸಭೆಯಲ್ಲೂ ಈ ಕುರಿತು ಆಕ್ರೋಶ ವ್ಯಕ್ತವಾಗಿತ್ತು.