ಮತಎಣಿಕೆ ಕೇಂದ್ರದ ಅಧಿಕಾರಿಗಳ ವಾಹನ ತಪಾಸಣೆಗೈದ ಎಸ್ಪಿ ಕಾರ್ಯಕರ್ತರ ವಿರುದ್ಧ ʼಕೊಲೆಯತ್ನʼ ಪ್ರಕರಣ ದಾಖಲು
ಬಸ್ತಿ: ಮತಯಂತ್ರಗಳ ದುರುಪಯೋಗ ಶಂಕೆಯ ಹಿನ್ನೆಲೆಯಲ್ಲಿ ಇಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಮಾರ್ಚ್ 9ರಂದು ತೆರಳುತ್ತಿದ್ದ ಅಧಿಕಾರಿಗಳ ವಾಹನಗಳನ್ನು ನಿಲ್ಲಿಸಿ ತಪಾಸಣೆಗೈದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರ ವಿರುದ್ಧ ಇಂದು ಪ್ರಕರಣ ದಾಖಲಾಗಿದೆ.
"ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ಒಬ್ಬರ ವಾಹನವನ್ನು ಕೆಲ ಸಮಾಜವಾದಿ ಪಕ್ಷದ ಕಾರ್ಯಕರ್ತರು ಶೋಧಿಸಿದ್ದರು. ಇದರ ಬೆನ್ನಲ್ಲೇ ಏಳು ದೂರುಗಳು ದಾಖಲಾಗಿದ್ದವು" ಎಂದು ಪೊಲೀಸ್ ವರಿಷ್ಠಾಧಿಕಾರಿ ಆಶಿಷ್ ಶ್ರೀವಾಸ್ತವ ಹೇಳಿದ್ದಾರೆ.
ದೂರುಗಳ ಆಧಾರದಲ್ಲಿ 100 ಹೆಸರಿಸದ ಸಮಾಜವಾದಿ ಪಕ್ಷ ಕಾರ್ಯಕರ್ತರ ವಿರುದ್ಧ ʼಕೊಲೆ ಯತ್ನ' ಮತ್ತು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಈ ಕ್ರಮವು ದೌರ್ಜನ್ಯಕಾರಿಯಾಗಿದೆ ಎಂದು ಸಮಾಜವಾದಿ ಪಕ್ಷದ ಶಾಸಕ ಬಸ್ತಿ ಮಹೇಂದ್ರ ಯಾದವ್ ಹೇಳಿದ್ದಾರೆ. ಪೊಲೀಸರು ರಾತ್ರೋರಾತ್ರಿ ಸಮಾಜವಾದಿ ಪಕ್ಷ ನಾಯಕರ ಮನೆಗಳಿಗೆ ದಾಳಿ ನಡೆಸುತ್ತಿದ್ದಾರೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸಿದ ದೂರಿನಲ್ಲಿ ಶಾಸಕರು ಆರೋಪಿಸಿದ್ದಾರೆ.