ಭ್ರಷ್ಟ ಅಧಿಕಾರಿಗಳ ಮಾಹಿತಿಯನ್ನು ನನ್ನ ವೈಯಕ್ತಿಕ ಫೋನ್ ನಂಬರ್ಗೆ ಕಳುಹಿಸಿ: ಪಂಜಾಬ್ ನೂತನ ಸಿಎಂ
ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭಿಸುವುದಾಗಿ ಘೋಷಣೆ
ಚಂಡೀಗಢ,ಮಾ.17: ಪಂಜಾಬ್ ನಲ್ಲಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಆಪ್ ಸರಕಾರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಭಗವಂತ ಮಾನ್ ಅವರು, ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಹಾಯವಾಣಿಯನ್ನು ಆರಂಭಿಸುವುದಾಗಿ ಗುರುವಾರ ಪ್ರಕಟಿಸಿದ್ದಾರೆ. ಪಂಜಾಬ್ ಗೆ ಉತ್ತಮ ಆಡಳಿತವನ್ನು ನೀಡುವುದಕ್ಕೆ ಒಂದೇ ಒಂದು ದಿನವನ್ನು ಕೂಡಾ ವ್ಯರ್ಥ ಮಾಡುವುದಿಲ್ಲವೆಂದು ಹೇಳಿರುವ ಭಗವಂತ ಮಾನ್ ಅವರು ಸ್ವಾತಂತ್ರ ಹೋರಾಟಗಾರ ಭಗತ್ಸಿಂಗ್ ಜನ್ಮದಿನವಾದ ಮಾರ್ಚ್ 23ರಂದು ಈ ಸಹಾಯವಾಣಿ ಕಾರ್ಯಾರಂಭಿಸಲಿದೆಎಯಂದು ತಿಳಿಸಿದರು.
‘‘ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯು ನನ್ನ ವೈಯಕ್ತಿಕ ಸಂಖ್ಯೆಯಾಗಲಿದೆ. ಒಂದು ವೇಳೆ ಯಾರಾದರೂ ಲಂಚವನ್ನು ಕೇಳಿದರೆ, ಆ ಕುರಿತಾದ ಆಡಿಯೋ ಹಾಗೂ ವಿಡಿಯೋವನ್ನು ಈ ದೂರವಾಣಿ ಸಂಖ್ಯೆಯ ವಾಟ್ಸಪ್ ಗೆ ಕಳುಹಿಸುವಂತೆ ತಿಳಿಸಿದ್ದಾರೆ.
‘‘ನಾನು ಯಾವುದೇ ಸರಕಾರಿ ಉದ್ಯೋಗಿಯನ್ನು ಬೆದರಿಸುತ್ತಿಲ್ಲ. ಆದರೆ ಶೇ.1ರಷ್ಟು ಉದ್ಯೋಗಿಗಳು ಮಾತ್ರವೇ ಭ್ರಷ್ಟರಾಗಿದ್ದಾರೆ. ಅವರಿಂದಾಗಿ ಇಡೀ ವ್ಯವಸ್ಥೆಯು ಕೊಳೆತು ಹೋಗಿದೆ. ಆಪ್ ಪಕ್ಷ ಮಾತ್ರವೇ ಈ ವ್ಯವಸ್ಥೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಎಂದು ಭಗವಂತ ಮಾನ್ ಟ್ವೀಟ್ ಮಾಡಿದ್ದಾರೆ. ತಾವು ನಿರ್ವಹಿಸುತ್ತಿರುವ ಉದ್ಯೋಗದಲ್ಲಿ ಲಂಚ ಮತ್ತಿತರ ಅವ್ಯವಹಾರಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವಿಡಿಯೋಗಳನ್ನು ಈ ವಿಡಿಯೋ ಮೂಲಕ ಅಪ್ಲೋಡ್ ಮಾಡಬಹುದಾಗಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ದೃಢಪಟ್ಟಲ್ಲಿ ಅವರಿಗೆ ಕಠಿಣವಾದ ಶಿಕ್ಷೆಯನ್ನು ನೀಡಲಾಗುವುದೆಂದು ಮಾನ್ ಎಚ್ಚರಿಕೆ ನೀಡಿದರು.