ವಾಟ್ಸ್ಯಾಪ್ ಚಾಟ್ಗಳಿಂದ ಮಾತ್ರ ಕ್ರಿಮಿನಲ್ ಸಂಚು ಆರೋಪ ಸಾಬೀತಾಗುವುದಿಲ್ಲ ಎಂದ ದಿಲ್ಲಿ ಹೈಕೋರ್ಟ್
ಮುಸ್ಲಿಮರನ್ನು ಕೊಲ್ಲಲು ಸಂಚು ಹೂಡಿದ ಆರೋಪವಿದ್ದ 12 ಮಂದಿಯ ಖುಲಾಸೆ
ದಿಲ್ಲಿ ಹಿಂಸಾಚಾರ- ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಸಂಚು ಹೂಡಿದ ಆರೋಪ ಎದುರಿಸುತ್ತಿದ್ದ 12 ಮಂದಿಯನ್ನು ದಿಲ್ಲಿಯ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಕಟ್ಟರ್ ಹಿಂದು ಏಕತಾ ಎಂಬ ಹೆಸರಿನ ವಾಟ್ಸ್ಯಾಪ್ ಗುಂಪನ್ನು ಹಿಂಸಾಚಾರದ ಸಂದರ್ಭ ರಚಿಸಿ ಮುಸ್ಲಿಮರನ್ನು ಕೊಲ್ಲಲು ಮತ್ತು ಅವರ ಆಸ್ತಿಗಳಿಗೆ ಹಾನಿಯೆಸಗುವ ಸಂಚು ಹೂಡಲಾಗಿತ್ತು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು.
ಆದರೆ ವಾಟ್ಸ್ಯಾಪ್ ಗ್ರೂಪ್ನಲ್ಲಿನ ಚಾಟ್ಗಳನ್ನು ಗಮನಿಸಿದಾಗ ಅದು ಯಾವುದೇ ಕಾನೂನುಬಾಹಿರ ಕಾರ್ಯವನ್ನು ಕೈಗೆತ್ತಿಕೊಳ್ಳಲು ರಚಿಸಲಾಗಿತ್ತು ಎಂದು ತಿಳಿದು ಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಾಟ್ಸ್ಯಾಪ್ ಗ್ರೂಪ್ ಚಾಟ್ಗಳ ಮುಖಾಂತರವೇ ಯಾರಾದರೂ ಅಕ್ರಮ ಕೃತ್ಯ ನಡೆಸಲು ಯೋಜಿಸಿದ್ದಾರೆಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ಹೇಳಿದ್ದಾರೆ.
ಹನ್ನೆರಡು ಮಂದಿ ಆರೋಪಿಗಳ ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈಬಿಟ್ಟ ನ್ಯಾಯಾಲಯ ಅದೇ ಸಮಯ ಕೊಲೆ ಸಹಿತ ಇತರ ಆರೋಪಗಳ ಕುರಿತಾದ ಪ್ರಕರಣವನ್ನು ಮುಂದುವರಿಸಿದೆ. ಐದು ಮಂದಿ ಮುಸ್ಲಿಮರ ಹತ್ಯೆ ಸಂಬಂಧವೂ ಈ 12 ಮಂದಿ ಆರೋಪ ಎದುರಿಸುತ್ತಿದ್ದಾರೆ. ಕೊಲೆ ಆರೋಪ ಹೊರತುಪಡಿಸಿ, ಹಿಂಸಾಚಾರ ಮತ್ತು ದಂಗೆಯ ಆರೋಪವೂ ಅವರ ಮೇಲಿದೆ.