ಹಿಜಾಬ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಹೊಸದಿಲ್ಲಿ: ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿದೆ.
ಮಂಡಳಿಯು ತನ್ನ ಕಾರ್ಯದರ್ಶಿ ಮುಹಮ್ಮದ್ ಫಝ್ಲುರ್ರಹೀಂ ಮತ್ತು ಇತರ ಇಬ್ಬರು ಅರ್ಜಿದಾರರಾದ ಮುನೀಸಾ ಬುಶ್ರಾ ಮತ್ತು ಜಲೀಸಾ ಸುಲ್ತಾನ ಯಾಸೀನ್ ಅವರ ಮುಖಾಂತರ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಇಸ್ಲಾಮಿಕ್ ಧರ್ಮಗುರುಗಳ ಸಂಘಟನೆಯಾದ ಸಮಸ್ತ ಕೇರಳ ಜಮ್ಮೀಯತುಲ್ ಉಲಮಾ ಕೂಡ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದೆ.
ಕುರ್ ಆನ್ನ ತಪ್ಪಾದ ವ್ಯಾಖ್ಯಾನದಿಂದ ಹಾಗೂ ಇಸ್ಲಾಮಿಕ್ ಕಾನೂನಿನ ತಪ್ಪು ಅರ್ಥೈಸುವಿಕೆಯ ಆಧಾರದಲ್ಲಿ ಹೈಕೋರ್ಟ್ ತೀರ್ಪು ಬಂದಿದೆ ಎಂದು ಸಂಘಟನೆ ತನ್ನ ಅರ್ಜಿಯಲ್ಲಿ ಹೇಳಿದೆ.
ಹೈಕೋರ್ಟ್ನ ಹಿಜಾಬ್ ತೀರ್ಪನ್ನು ಪ್ರಶ್ನಿಸಿ ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳ ತಕ್ಷಣ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಮಣ ಕಳೆದ ವಾರ ನಿರಾಕರಿಸಿದ್ದರಲ್ಲದೆ "ಪರೀಕ್ಷೆಗೂ ಈ ವಿಚಾರಕ್ಕೂ ಸಂಬಂಧವಿಲ್ಲ" ಎಂದು ಹೇಳಿದ್ದರು.