ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿದ ಗುಜರಾತ್ನ ಹಿಂದು ದೇಗುಲ
ಉಪವಾಸ ತೊರೆಯಲು ಮುಸ್ಲಿಮರಿಗೆ ಬಾಗಿಲು ತೆರೆದ ದೇವಾಲಯ
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಗುಜರಾತ್ನ ಬಾನಸ್ಕಂತ ಜಿಲ್ಲೆಯ ದಲ್ವಾನ ಎಂಬ ಗ್ರಾಮದಲ್ಲಿರುವ ಪುರಾತನ ಮತ್ತು ಖ್ಯಾತ ಹಿಂದು ದೇವಳವಾಗಿರುವ ವರಂದ ವೀರ್ ಮಹಾರಾಜ್ ಮಂದಿರ್ ಶುಕ್ರವಾರ ತನ್ನ ಒಂದು ಕಾರ್ಯವೊಂದರ ಮುಖಾಂತರ ಕೋಮು ಸೌಹಾರ್ದದ ಸಂದೇಶವನ್ನು ಜಗತ್ತಿಗೆ ಸಾರಿದೆ.
ಶುಕ್ರವಾರ ಸಂಜೆ ರಮಝಾನ್ ಉಪವಾಸ ತೊರೆಯಲು ಸುಮಾರು 100 ಮುಸ್ಲಿಮರಿಗೆ ತನ್ನ ಬಾಗಿಲನ್ನು ಈ 1200 ವರ್ಷಗಳ ಇತಿಹಾಸವುಳ್ಳ ದೇವಳ ತೆರೆದಿದೆ. ವಡ್ಗಮ್ ತಾಲೂಕಿನ ಈ ಗ್ರಾಮದ ಸುಮಾರು 100 ಮುಸ್ಲಿಮರಿಗೆ ಇಲ್ಲಿ ನಮಾಝ್ ನಿರ್ವಹಿಸಲು ಹಾಗೂ ದಿನದ ಉಪವಾಸ ತೊರೆಯಲು ಸಂಜೆ ಏಳು ಗಂಟೆಗೆ ಏರ್ಪಾಟು ಮಾಡಲಾಗಿತ್ತು ಎಂದು indianexpress.com ವರದಿ ಮಾಡಿದೆ.
ಉಪವಾಸ ತೊರೆಯಲು ಹಾಗೂ ಆತಿಥ್ಯ ಒದಗಿಸಲು ಇದೇ ಮೊದಲ ಬಾರಿ ದೇವಳ ಏರ್ಪಾಟು ಮಾಡಿತ್ತು. ಈ ವೇಳೆ ಸೇವಿಸಲೆಂದು ನಾಲೈದು ವಿಧದ ಹಣ್ಣು ಹಂಪಲು, ಖರ್ಜೂರ ಮತ್ತು ಶರ್ಬತ್ ಸಿದ್ಧಪಡಿಸಲಾಗಿತ್ತು. ಸ್ಥಳೀಯ ಮಸೀದಿಯ ಮೌಲಾನ ಸಾಹಿಬ್ ಅವರನ್ನು ನಾನೇ ಖುದ್ದಾಗಿ ಸ್ವಾಗತಿಸಿದೆ ಎಂದು ದೇವಳದ ಅರ್ಚಕ ಪಂಕಜ್ ಠಾಕರ್ ಹೇಳಿದ್ದಾರೆ.
ಈ ಗ್ರಾಮದಲ್ಲಿ ಸಾಮರಸ್ಯ ನೆಲೆಯೂರಿದೆ, ಹಿಂದುಗಳ ಹಬ್ಬದ ಸಂದರ್ಭ ಮುಸಲ್ಮಾನರು ಸಹಾಯ ಮಾಡುತ್ತಾರೆ. ಈ ಬಾರಿ ಮುಸಲ್ಮಾನರು ದೇವಸ್ಥಾನದಲ್ಲಿ ತಮ್ಮ ಉಪವಾಸ ತೊರೆಯಲು ಅನುವು ಮಾಡಿಕೊಡಬೇಕೆಂದು ಹಿಂದು ಮತ್ತು ಮುಸಲ್ಮಾರನ್ನು ಕೇಳಿಕೊಂಡೆವು. ಇದು ನಮಗೊಂದು ಭಾವನಾತ್ಮಕ ಕ್ಷಣವಾಗಿತ್ತು ಎಂದು ಗ್ರಾಮದ ಹಿರಿಯರೊಬ್ಬರು ಹೇಳಿದ್ದಾರೆ.