ಅಸನ್ಸೋಲ್ ಲೋಕಸಭಾ ಉಪಚುನಾವಣೆ: ಶತ್ರುಘ್ನ ಸಿನ್ಹಾಗೆ ಭರ್ಜರಿ ಜಯ
ಹೊಸದಿಲ್ಲಿ,ಎ.17: ಪಶ್ಚಿಮ ಬಂಗಾಳ, ಬಿಹಾರ, ಚತ್ತೀಸ್ಗಢ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ಐದು ಉಪಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಪಶ್ಚಿಮಬಂಗಾಳದ ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಹಾಗೂ ಬಾಲಿಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಲಾಲುಪ್ರಸಾದ್ ನೇತೃತ್ವದ ಆರ್ಜೆಡಿ ಬಿಹಾರದ ಬೊಕಾಹನ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಚತ್ತೀಸ್ಗಢದ ಖೈರಾಘರ್ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ವಿಧಾನಸಭಾ ಉಪಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಒಂದು ಲೋಕಸಭಾ ಕ್ಷೇತ್ರ ಹಾಗೂ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾಗಿದ್ದು, ತೀವ್ರ ಮುಖಭಂಗ ಅನುಭವಿಸಿದೆ.
ಅಸಾನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ, ಚಿತ್ರನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸಿನ್ಹಾ ಅವರು ಬಿಜೆಪಿಯ ಅಭ್ಯರ್ಥಿ, ವಸ್ತ್ರವಿನ್ಯಾಸಕಿ-ಹಾಲಿ ಶಾಸಕಿ ಅಗ್ನಿಮಿತ್ರಾ ಪಾಲ್ ಅವರನ್ನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಗೊಂಡ ಬಳಿಕ ಅಸಾನ್ಸೊಲ್ ಲೋಕಸಭಾ ಕ್ಷೇತ್ರವು ಖಾಲಿಬಿದ್ದಿತ್ತು. ಈ ಕ್ಷೇತ್ರವನ್ನ ಟಿಎಂಸಿ ಗೆದ್ದಿರುವುದು ಇದೇ ಮೊದಲ ಸಲವಾಗಿದೆ.
ಬಾಲಿಗಂಜ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ, ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಬಾಬುಲ್ಸುಪ್ರೀಯೋ ಗೆಲುವಿನ ನಗೆಬೀರಿದ್ದಾರೆ. ಇಲ್ಲಿ ಬಿಜೆಪಿಯು ಕೇಯಾ ಘೋಷ್ ಹಾಗೂ ಸಿಪಿಎಂ ಸಾಯಿರಾ ಶಾ ಹಲೀಂ ಅವರನ್ನು ತಮ್ಮ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿತ್ತು.
ಇತ್ತ ಬಿಹಾರದಲ್ಲಿಯೂ ಬಿಜೆಪಿ-ಜೆಡಿಯು ನೇತೃತ್ವದ ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆಯಾಗಿದೆ. ಬೊಚಾಹಾನ್ ವಿಧಾನಸಭಾ ಕ್ಷೇತ್ರದಲ್ಲಿ ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿ ಯು 36 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾದ ಬೊಚಾಹಾನ್ ವಿಧಾನಸಭಾ ಕ್ಷೇತ್ರದಲ್ಲಿ ಆರ್ಜೆಡಿ ಅಭ್ಯರ್ಥಿ ಅಮರ್ ಕುಮಾರ್ ಪಾಸ್ವಾನ್ ಅವರು ತನ್ನ ನಿಕಟ ಸ್ಪರ್ಧಿ ಬೇಬಿ ಕುಮಾರಿ ಅವರನ್ನು 36 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ)ಯ ಶಾಸಕ ಮುಸಾಫಿರ್ ಪಾಸ್ವಾನ್ ನಿಧನ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಈ ಉಪಚುನಾವಣೆಯಲ್ಲಿ ವಿಕಾಸಶೀಲ ಇನ್ಸಾಫ್ ಪಾರ್ಟಿಯ ಅಭ್ಯರ್ಥಿ ಡಾ.ಗೀತಾ ಕುಮಾರಿ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚತ್ತೀಸ್ಗಢದ ಖೈರಾಘರ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಯಶೋದಾ ನೀಲಾಂಬರ್ ಅವರು ವರ್ಮಾ ಅವರು 20 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ. ಕಳೆದ ವರ್ಷದ ನವೆಂಬರ್ನಲ್ಲಿ ಜನತಾ ಕಾಂಗ್ರೆಸ್ ಚತ್ತೀಸ್ಗಢ (ಜೋಗಿ) ಶಾಸಕ ದೇವವ್ರತ್ಸಿಂಗ್ ಕಳೆದ ವರ್ಷದ ನವೆಂಬರ್ ನಿಧನರಾದ್ದರಿಂದ ತೆರವಾದ ಈ ಸ್ಥಾನಕ್ಕೆ ಚುನಾವಣೆ ನಡೆದಿದೆ.
ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸೋಲಿನ ಕಹಿ ಉಂಡಿದೆ. ಆಡಳಿತಾರೂಢ ಮಹಾವಿಕಾಸ್ ಅಘಾಡಿ ಗೆಲುವಿನ ನಗೆಬೀರಿದೆ.
ಮಹಾರಾಷ್ಟ್ರದ ಕೊಲ್ಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಜಯಶ್ರೀ ಜಾಧವ್ 18 ಸಾವಿರ ಮತಗಳಿಂದ ಜಯಗಳಿಸಿದ್ದಾರೆ. ಬಿದೆಪಿ ಅಭ್ಯರ್ಥಿ ಸತ್ಯಜಿತ್ ಕದಂ ಎರಡನೆ ಸ್ಥಾನದಲ್ಲಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕ ಚಂದ್ರಕಾಂತ್ ಜಾಧವ್ ಅವರು ಕೋವಿಡ್19 ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು.