ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲು ಕ್ರಿಪ್ಟೋಕರೆನ್ಸಿ ಬಳಕೆಯಾಗಬಹುದು: ನಿರ್ಮಲಾ ಸೀತಾರಾಮನ್
ವಾಷಿಂಗ್ಟನ್: ಫಿನ್ಟೆಕ್ ಕ್ರಾಂತಿಯ ನಡುವೆ ಕ್ರಿಪ್ಟೋಕರೆನ್ಸಿಯ ದೊಡ್ಡ ಅಪಾಯವೆಂದರೆ ಅದು ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಲು ಬಳಕೆಯಾಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸೆಮಿನಾರ್ನಲ್ಲಿ ನಿರ್ಮಲಾ ಸೀತಾರಾಮನ್ ಮಾತನಾಡಿದರು.
ಕ್ರಿಪ್ಟೋ ಕರೆನ್ಸಿಯ ನಿಯಂತ್ರಣ, ಅದರ ಬಳಕೆ ಹಾಗೂ ಅಪಾಯದ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿದರು.
"ಬಹುಶಃ ತಂತ್ರಜ್ಞಾನ ಬಳಕೆಯ ಮೂಲಕ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಕ್ರಿಪ್ಟೊ ಕರೆನ್ಸಿ ಜಾಲವನ್ನು ನಿಯಂತ್ರಿಸುವಷ್ಟು ಆ ತಂತ್ರಜ್ಞಾನವು ಸಮರ್ಥವಾಗಿರಬೇಕು. ಅದು ಒಂದು ರಾಷ್ಟ್ರದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಎಲ್ಲರೂ ಆ ಬಗ್ಗೆ ಯೋಚಿಸಬೇಕು ”ಎಂದು ಸಚಿವರು ಹೇಳಿದರು.
ಕೋವಿಡ್-19 ಅವಧಿಯಲ್ಲಿ ಭಾರತ ಡಿಜಿಟಲ್ ವ್ಯವಸ್ಥೆಗೆ ತೆರೆದುಕೊಂಡ ಬಗೆಯನ್ನು ನಿರ್ಮಲಾ ತೆರೆದಿಟ್ಟರು.
2019ರ ಮಾಹಿತಿ ಪ್ರಕಾರ ಭಾರತದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಂಡ ಪ್ರಮಾಣ ಸುಮಾರು ಶೇ.85ರಷ್ಟು. ಅದೇ ವರ್ಷ ಜಾಗತಿಕವಾಗಿ ಡಿಜಿಟಲ್ ಜಗತ್ತಿಗೆ ತೆರೆದುಕೊಂಡವರು ಶೇ.64ರಷ್ಟು. ಡಿಜಿಟಲ್ ಹಣವು ದೊಡ್ಡ ಪಾತ್ರವನ್ನು ವಹಿಸುವ ಒಂದು ಮಾರ್ಗವಾಗಿ ನಾನು ನೋಡುತ್ತೇನೆ" ಎಂದು ನಿರ್ಮಲಾ ಹೇಳಿದರು.