ಗೂಂಡಾಗಿರಿಯನ್ನು ಕೊನೆಗೊಳಿಸಲು ಬಿಜೆಪಿ ಕಛೇರಿಯನ್ನು ನೆಲಸಮಗೊಳಿಸಬೇಕು: ಎಎಪಿ
Photo: Twitter/aap
ಹೊಸದಿಲ್ಲಿ: ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ವಾಯುವ್ಯ ದಿಲ್ಲಿಯ ಜಹಾಂಗೀರ್ಪುರಿಯಲ್ಲಿ ಕೆಡವಲಾದ ಅತಿಕ್ರಮಣ ಕಟ್ಟಡಗಳಿಗೆ ಬಿಜೆಪಿ ಹೊಣೆ ಎಂದು ಆರೋಪಿಸಿದೆ.
ಧ್ವಂಸ ಕಾರ್ಯಾಚರಣೆಯನ್ನು "ನಾಟಕ" ಎಂದು ಕರೆದ ಉಪ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಮನೀಶ್ ಸಿಸೋಡಿಯಾ, "15 ವರ್ಷಗಳಿಂದ ಲಂಚ ಪಡೆದು ಈ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಿದ ನಾಯಕರ ಮನೆಗಳ ಮೇಲೆ ಬಿಜೆಪಿ ಬುಲ್ಡೋಜರ್ಗಳನ್ನು ಯಾವಾಗ ಬಳಸುತ್ತದೆ" ಎಂದು ಪ್ರಶ್ನಿಸಿದ್ದಾರೆ.
ಆ ನಾಯಕರ ಮನೆಗಳನ್ನೂ ಕೆಡವಿ, ಅವರ ಮನೆಗಳು ಯಾವಾಗ ಬುಲ್ಡೋಜರ್ ಆಗುತ್ತವೆ ಎನ್ನುವುದನ್ನು ಬಿಜೆಪಿಯೇ ಹೇಳಬೇಕು, ಎಂದು ದಶಕಕ್ಕೂ ಹೆಚ್ಚು ಕಾಲದಿಂದ ದಿಲ್ಲಿ ಪೌರ ಸಂಸ್ಥೆಗಳನ್ನು ನಡೆಸುತ್ತಿರುವ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪ್ರಶ್ನಿಸಿದ್ದಾರೆ.
ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್ಡಿಎಂಸಿ) ಜಹಾಂಗೀರ್ಪುರಿಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಒಂಬತ್ತು ಬುಲ್ಡೋಜರ್ಗಳನ್ನು ಬಳಸಿ ಗಲಭೆಯ ಶಂಕಿತ ಆರೋಪಿಗಳಿಗೆ ಸೇರಿದ ಮನೆ, ಆಸ್ತಿಗಳನ್ನು ಕೆಡವಲು ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ, ತುರ್ತು ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ತ್ರಿಸದಸ್ಯ ಸುಪ್ರೀಂ ಕೋರ್ಟ್ ಪೀಠ, ಮುಂದಿನ ವಿಚಾರಣೆ ನಡೆಯುವವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿತ್ತು.
ಆದರೆ, ಜಹಾಂಗೀರ್ಪುರಿಯಲ್ಲಿನ ಎಂಸಿಡಿ ಅಧಿಕಾರಿಗಳು, ಆದೇಶದ ಪ್ರತಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿ ಹಲವಾರು ಅಂಗಡಿಗಳನ್ನು ಮಾತ್ರವಲ್ಲದೆ ಮಸೀದಿಯ ಗೇಟ್ಗಳು ಮತ್ತು ಗೋಡೆಯನ್ನು ಸಹ ಧ್ವಂಸಗೊಳಿಸಲು ಮುಂದಾದರು ಎಂದು NDTV.com ವರದಿ ಮಾಡಿದೆ.
ದೇಶದಲ್ಲಿ ಅಶಾಂತಿ ಎಬ್ಬಿಸಿರುವುದಕ್ಕೇ ಬಿಜೆಪಿಯೇ ಕಾರಣ ಎಂಬುದು ಎಎಪಿಯ ನಿಲುವಾಗಿದೆ ಎಂದು ಹೇಳಿದ ಸಿಸೋಡಿಯಾ, ಗೂಂಡಾಗಿರಿಯನ್ನು ಕೊನೆಗೊಳಿಸಲು ನಾವು ಬಿಜೆಪಿ ಕೇಂದ್ರ ಕಚೇರಿಯನ್ನು ಬುಲ್ಡೋಜ್ (ನೆಲಸಮ)ಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.