ತೇಜ್ಪಾಲ್ ಖುಲಾಸೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಗೋವಾ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಅನುಮತಿ
ಚಂಡಿಗಢ: ತರುಣ್ ತೇಜಪಾಲ್ ಅತ್ಯಾಚಾರ ಪ್ರಕರಣದಲ್ಲಿ ದೂರುದಾರರ ನಡವಳಿಕೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ನಿರ್ದಿಷ್ಟ ಅಭಿಪ್ರಾಯವನ್ನು ಪುನರ್ ಪರಿಶೀಲಿಸುವ ಅಗತ್ಯತೆ ಇದೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ಗೋವಾ ಪೀಠ ಶನಿವಾರ ಹೇಳಿದೆ.
ಪ್ರಕರಣದಲ್ಲಿ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಗೋವಾ ಸರಕಾರಕ್ಕೆ ಅದು ಅನುಮತಿ ನೀಡಿದೆ.
ತೇಜ್ಪಾಲ್ ಬಿಡುಗಡೆ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಮೇಲ್ಮನವಿಗೆ ತೇಜ್ಪಾಲ್ ಸಲ್ಲಿಸಿದ ಆಕ್ಷೇಪ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಎಂ.ಎಸ್. ಸೋನಕ್ ಹಾಗೂ ಆರ್.ಎನ್. ಲದ್ದಾ ಅವರನ್ನು ಒಳಗೊಂಡ ಪೀಠ, ಖುಲಾಸೆ ಆದೇಶದಲ್ಲಿನ ಕಾರಣಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.
ತೆಹಲ್ಕಾ ಮ್ಯಾಗಝಿನ್ನ ಮಾಜಿ ಪ್ರಧಾನ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ಅವರು 2013ರಲ್ಲಿ ತನ್ನ ಕಿರಿಯ ಸಹೋದ್ಯೋಗಿಗೆ ಎಲವೇಟರ್ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಕಳೆದ ವರ್ಷ ಮೇಯಲ್ಲಿ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು.