ಚೆಂಡು ಎಂದು ಭಾವಿಸಿ ಕಚ್ಛಾ ಬಾಂಬ್ ನಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಸ್ಫೋಟ: ಐವರ ಬಂಧನ
ಕೋಲ್ಕತಾ, ಎ 25: ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯ ಸಮೀಪದ ಕಾಲಿಯಾಚಾಕ್ನ ಗೋಪಾಲನಗರ ಗ್ರಾಮದಲ್ಲಿ ರವಿವಾರ ಮಕ್ಕಳು ಚೆಂಡು ಎಂದು ಭಾವಿಸಿ ಕಚ್ಚಾ ಬಾಂಬ್ ನಲ್ಲಿ ಆಟವಾಡುತ್ತಿದ್ದರು.
ಈ ಸಂದರ್ಭ ಅದು ಸ್ಫೋಟಗೊಂಡು ಐವರು ಮಕ್ಕಳು ಗಾಯಗೊಂಡಿದ್ದರು. ಬಂಧಿತ ಐವರು ಸ್ಥಳಯ ನಿವಾಸಿಗಳು ಎಂದು ಪೊಲೀಸ್ ಅಧೀಕ್ಷಕ ಅಮಿತಾವ್ ಮೈಟಿ ತಿಳಿಸಿದ್ದಾರೆ. ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಹಾಗೂ ಮಾಲ್ಡಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾದ ಇಬ್ಬರು ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಮಸೀದಿಯ ಸಮೀಪ ಇರುವ ಮರದ ಕೆಳಗೆ ಪತ್ತೆಯಾದ ಕಚ್ಚಾ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು. ಸುತ್ತಮುತ್ತ ಇಂತಹ ಸ್ಫೋಟಕಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story