ಸಿಕ್ಖ್ ಇತಿಹಾಸ ವಿರೂಪ ಆರೋಪ; ಪಂಜಾಬ್ನಲ್ಲಿ 12ನೇ ತರಗತಿಯ 3 ಪುಸ್ತಕ ನಿಷೇಧ
ಸಾಂದರ್ಭಿಕ ಚಿತ್ರ
ಚಂಡೀಗಢ: ಸಿಕ್ಖ್ ಇತಿಹಾಸವನ್ನು ವಿರೂಪಗೊಳಿಸಿದ ಆರೋಪದಲ್ಲಿ ಪಂಜಾಬ್ ಶಾಲಾ ಶಿಕ್ಷಣ ಮಂಡಳಿ, ಮೂರು ಪುಸ್ತಕಗಳನ್ನು ನಿಷೇಧಿಸಿದೆ.
ಈ ಕೃತಿಗಳಲ್ಲಿ ಸಿಕ್ಖ್ ಇತಿಹಾಸಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ವಿರೂಪಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ಲೇಖಕರು ಮತ್ತು ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಶಿಕ್ಷಣ ಸಚಿವ ಗುರ್ಮೀತ್ ಸಿಂಗ್ ಮೀತ್ ಹೇಳಿದ್ದಾರೆ.
"ಸಿಖ್ ಇತಿಹಾಸ ನಮ್ಮೆಲ್ಲರಿಗೆ ಮತ್ತು ಭವಿಷ್ಯದ ಪೀಳಿಗೆಗೆ ಅಮೂಲ್ಯ. ಸಿಕ್ಖ್ ಇತಿಹಾಸಕ್ಕೆ ಸಂಬಂಧಿಸಿದಂತೆ 12ನೇ ತರಗತಿಯ ಪಂಜಾಬ್ ಇತಿಹಾಸ ಕೃತಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಭಗವಾನ್ ಮಾನ್ ಅವರ ಸೂಚನೆಯಂತೆ, ಲೇಖಕರು/ ಪ್ರಕಾಶಕರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಹಾಗೂ ಈ ಪುಸ್ತಕಗಳ ಬಳಕೆಯನ್ನು ನಿಷೇಧಿಸಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರದ ಮುಖ್ಯ ಉದ್ದೇಶ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ಗುರುಗಳು, ಸಿಕ್ಖ್ ಜಗತ್ತು ಮತ್ತು ಪಂಜಾಬಿನ ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮನ್ಜೀತ್ ಸಿಂಗ್ ಸೋಧಿ ಬರೆದಿರುವ "ಮಾಡರ್ನ್ ಎಬಿಸಿ ಆಫ್ ಹಿಸ್ಟರಿ ಆಫ್ ಪಂಜಾಬ್", ಮಹೀಂದ್ರ ಪಾಲ್ ಕೌರ್ ಬರೆದಿರುವ "ಹಿಸ್ಟರಿ ಆಫ್ ಪಂಜಾಬ್" ಮತ್ತು ಎಂ.ಎಸ್.ಮಾನ್ ಬರೆದಿರುವ "ಹಿಸ್ಟರಿ ಆಫ್ ಪಂಜಾಬ್" ಜಲಂಧರ್ ಮೂಲದ ಮೂರು ಭಿನ್ನ ಪ್ರಕಾಶಕರು ಈ ಕೃತಿಗಳನ್ನು ಪ್ರಕಟಿಸಿದ್ದಾರೆ.