ಜಹಾಂಗೀರ್ ಪುರಿಯಲ್ಲಿ ಜತೆಯಾಗಿ ಈದ್ ಆಚರಿಸಿ ಸಾಮರಸ್ಯ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಹೊಸದಿಲ್ಲಿ: ರಾಮನವಮಿ ಮೆರವಣಿಗೆ ನಡೆಯುತ್ತಿರುವ ವೇಳೆ ಇತ್ತೀಚೆಗೆ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ರಾಜಧಾನಿಯ ಜಹಾಂಗೀರ್ ಕುಶಲ್ ಚೌಕ್ನಲ್ಲಿ ಮಂಗಳವಾರ ಹಿಂದು ಮತ್ತು ಮುಸಲ್ಮಾನ ಬಾಂಧವರು ಈದ್ ಹಬ್ಬವನ್ನು ಜತೆಯಾಗಿ ಆಚರಿಸಿದರು. ಎರಡೂ ಸಮುದಾಯದ ಮಂದಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿ ಪರಸ್ಪರ ಆಲಂಗಿಸಿ ಶಾಂತಿ ಸೌಹಾರ್ದತೆಯ ಸಂದೇಶ ಸಾರಿದರು.
ಅಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಭದ್ರತಾ ಸಿಬ್ಬಂದಿಗಳಿಗೂ ಸ್ಥಳೀಯ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಕಳೆದ ತಿಂಗಳು ಹಿಂಸೆಗೆ ಸಾಕ್ಷಿಯಾಗಿದ್ದ ಜಹಾಂಗೀರ್ಪುರಿಯಲ್ಲಿ ನಾಗರಿಕರು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಪರಸ್ಪರರ ಧರ್ಮವನ್ನು ಗೌರವಿಸುತ್ತಿದ್ದಾರೆ ಎಂದು ಇಂದಿನ ಈದ್ ಆಚರಣೆ ಸಾಬೀತುಪಡಿಸಿದೆ ಎಂದು ಸ್ಥಳೀಯ ನಾಗರಿಕರೊಬ್ಬರು ಹೇಳಿದ್ದಾರೆ.
ಈದ್ ಅನ್ನು ಪ್ರದೇಶದಲ್ಲಿ ಶಾಂತಿಯುತವಾಗಿ ಆಚರಿಸಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷರಾದ ಇಂದ್ರಮಣಿ ತಿವಾರಿ ಹೇಳಿದ್ದಾರೆ. ಮಸೀದಿಯಿರುವ ಸಿ ಬ್ಲಾಕ್ ಹೊರತುಪಡಿಸಿ ಕುಶಾಲ್ ಚೌಕ್ ಸುತ್ತಮುತ್ತಲಿನ ಬಹುತೇಕ ವಾಣಿಜ್ಯ ಮಳಿಗೆಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ.