ನೋಯ್ಡಾದಲ್ಲಿ ರಸ್ತೆ ಅಪಘಾತ, ಕರ್ನಾಟಕದ ಒಬ್ಬರು ಸೇರಿದಂತೆ ಐವರು ಮೃತ್ಯು
ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಾರಾಷ್ಟ್ರದ ನಾಲ್ವರು ಹಾಗೂ ಕರ್ನಾಟಕದ ಒಬ್ಬರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನ ಅಪಘಾತದಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ 5 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಏಳು ಜನರು ಮಹೀಂದ್ರಾ ಬೊಲೆರೊದಲ್ಲಿದ್ದರು. ಅವರು ಆಗ್ರಾದಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಜೆವಾರ್ ಟೋಲ್ ಪ್ಲಾಝಾ ಬಳಿ ಅವರ ಕಾರು ಹಿಂಬದಿಯಿಂದ ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದಿದೆ" ಎಂದು ಗೌತಮ್ ಬುದ್ಧ ನಗರ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಡಂಪರ್ ಟ್ರಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಮಹಾರಾಷ್ಟ್ರದ ಪುಣೆಯ ನಿವಾಸಿಗಳಾದ ಚಂದ್ರಕಾಂತ ಬುರಾಡೆ( 68 ವರ್ಷ), ಸ್ವರ್ಣ ಬುರಾಡೆ( 59), ಮಲನ್ ಕುಂಬಾರ್( 68), ರಂಜನಾ ಪವಾರ್(60) ಹಾಗೂ ಕರ್ನಾಟಕದ ಬೆಳಗಾವಿ ಮೂಲದ ನುವಾಂಜನ್ ಮುಜಾವರ್ (53 ವರ್ಷ) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಮಹಾರಾಷ್ಟ್ರದ ಸತಾರಾ ಮೂಲದ ನಾರಾಯಣ ಕೋಲೇಕರ್ (40) ಹಾಗೂ ಕರ್ನಾಟಕದ ಬೆಳಗಾವಿಯ ಸುನೀತಾ ಗಸ್ತೆ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.