ಯುಪಿಎ ಸದೃಢಗೊಳಿಸಿದ್ದ ಆರ್ಥಿಕತೆಯನ್ನು ಬಿಜೆಪಿ ನಾಶಗೊಳಿಸಿದೆ: ರಾಹುಲ್ ಗಾಂಧಿ
PHOTO
:TWITTER
ಜೈಪುರ,ಮೇ 16: ಹಿಂದಿನ ಯುಪಿಎ ಸರಕಾರವು ಸದೃಢಗೊಳಿಸಿದ್ದ ದೇಶದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಾಶಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೋಮವಾರ ಆರೋಪಿಸಿದರು.
ರಾಜಸ್ಥಾನದ ಬನ್ಸವಾರಾ ಜಿಲ್ಲೆಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್,ಶ್ರೀಮಂತರು ಮತ್ತು ಆಯ್ದ ಇಬ್ಬರು-ಮೂವರು ಕೈಗಾರಿಕೋದ್ಯಮಿಗಳಿಗಾಗಿ ಒಂದು ಹಾಗೂ ದಲಿತರು,ರೈತರು,ಬಡವರು ಮತ್ತು ಶೋಷಿತರಿಗಾಗಿ ಇನ್ನೊಂದು;ಹೀಗೆ ಎರಡು ಹಿಂದುಸ್ಥಾನಗಳನ್ನು ಸೃಷ್ಟಿಸಲು ಬಿಜೆಪಿ ಮತ್ತು ಮೋದಿ ಬಯಸಿದ್ದಾರೆ. ಆದರೆ ಕಾಂಗ್ರೆಸ್ ಒಂದೇ ಹಿಂದುಸ್ಥಾನವನ್ನು ಬಯಸಿದೆ. ಇದು ದೇಶದಲ್ಲಿಯ ಹೋರಾಟವಾಗಿದೆ ಎಂದರು.
‘ಬಿಜೆಪಿ ಸರಕಾರವು ನಮ್ಮ ಆರ್ಥಿಕತೆಯ ಮೇಲೆ ದಾಳಿ ನಡೆಸಿದೆ. ಪ್ರಧಾನಿ ನೋಟುಗಳನ್ನು ನಿಷೇಧಿಸಿದರು ಮತ್ತು ಜಿಎಸ್ಟಿಯನ್ನು ತಪ್ಪಾಗಿ ಜಾರಿಗೊಳಿಸಿದರು. ಇವುಗಳಿಂದಾಗಿ ಆರ್ಥಿಕತೆಯು ನಾಶಗೊಂಡಿದೆ. ಆರ್ಥಿಕತೆಯನ್ನು ಸದೃಢಗೊಳಿಸಲು ಯುಪಿಎ ಶ್ರಮಿಸಿತ್ತು,ಆದರೆ ಮೋದಿ ಆರ್ಥಿಕತೆಗೆ ಹಾನಿಯನ್ನುಂಟು ಮಾಡಿದ್ದಾರೆ ’ ಎಂದರು.