ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ವಕೀಲರು
"ವರದಿಯನ್ನು ಸಾಕ್ಷ್ಯವಾಗಿಟ್ಟುಕೊಂಡು ಅಂತಿಮ ತೀರ್ಪು": ವಕೀಲರ ಹೇಳಿಕೆ
ವಾರಣಾಸಿ: ಇಲ್ಲಿನ ಜ್ಞಾನವಾಪಿ ಮಸೀದಿಯ ವೀಡಿಯೊ ಸರ್ವೇ ನಡೆಸಿದ್ದರ ವರದಿಯನ್ನು ಸುಪ್ರೀಂಕೋರ್ಟ್ ಅಣತಿಯಂತೆ ಇಂದು ಗುರುವಾರ ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಸಂಜೆಯ ವೇಳೆ ನ್ಯಾಯಾಲಯದಿಂದ ನೇಮಕಗೊಂಡಿದ್ದ ಮಾಜಿ ಆಯುಕ್ತರಾದ ಅಜಯ್ ಮಿಶ್ರಾ ವರದಿ ಸಲ್ಲಿಸಿದರೆ, ಇಂದು ಬೆಳಗ್ಗೆ ಇನ್ನಿತರರು ವರದಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ 10:30ಕ್ಕೆ ವಿಶಾಲ್ ಸಿಂಗ್ ಮತ್ತು ಅಜಯ್ ಪ್ರತಾಪ್ ಸಿಂಗ್ ಅವರು ಮೂರು ದಿನಗಳ ಸಮೀಕ್ಷೆಯ ವಿವರವನ್ನು ತಮ್ಮ ವರದಿಯೊಂದಿಗೆ ಸಲ್ಲಿಸಿದ್ದಾರೆ ಎಂದು ವಾರಣಾಸಿಯ ವಕೀಲರಾದ ನಿತ್ಯಾನಂದ ರೈ ತಿಳಿಸಿದ್ದಾರೆ.
"ಫೋಟೊಗಳು ಮತ್ತು ವೀಡಿಯೋಗಳನ್ನೊಳಗೊಂಡ ಚಿಪ್ ಅನ್ನೂ ಸಲ್ಲಿಸಲಾಗಿದೆ. ಇದರ ಒಂದು ಪ್ರತಿಯನ್ನು ಇನ್ನೊಂದು ವಿಭಾಗಕ್ಕೂ ಲಭ್ಯವಾಗುವಂತೆ ಮಾಡಲಾಗುವುದು. ಅವರು ಪ್ರತಿಯನ್ನು ಪಡೆದ ಬಳಿಕ ನ್ಯಾಯಾಲಯವು ಅವರಿಂದ ಆಕ್ಷೇಪಣೆಗಳನ್ನು ಆಹ್ವಾನಿಸುತ್ತದೆ. ಬಳಿಕ ವರದಿಯನ್ನು ಸಾಕ್ಷ್ಯವಾಗಿಟ್ಟುಕೊಂಡು ನ್ಯಾಯಾಲಯವು ಅಂತಿಮ ತೀರ್ಪು ನೀಡುತ್ತದೆ" ಎಂದು ಅವರು ಹೇಳಿದ್ದಾರೆ.