ಕಾಂಗ್ರೆಸ್ ಪಕ್ಷ ತೊರೆದ ಬಳಿಕ ʼಬಿಜೆಪಿ ಸೇರ್ಪಡೆʼ ಸುದ್ದಿಯ ಕುರಿತು ಮೌನಮುರಿದ ಹಾರ್ದಿಕ್ ಪಟೇಲ್
ಅಹ್ಮದಾಬಾದ್: ಪಾಟೀದಾರ್ ಮುಖಂಡ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ತಾಣದಾದ್ಯಂತ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ನಾನೀಗ ಬಿಜೆಪಿ ಪಕ್ಷದಲ್ಲಿಲ್ಲ, ಬಿಜೆಪಿ ಸೇರ್ಪಡೆಯಾಗುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಳೆದ 33 ವರ್ಷಗಳಿಂದ ಏಳೆಂಟು ಮಂದಿ ನಡೆಸುತ್ತಿದ್ದಾರೆ. ನನ್ನಂತಹ ಕಾರ್ಯಕರ್ತರು ದೈನಂದಿನ 500-600ಕಿ.ಮೀ ಪ್ರಯಾಣ ಮಾಡುತ್ತೇವೆ. ಜನರ ನಡುವೆ ಬೆರೆತು ಅವರ ಪರಿಸ್ಥಿತಿ ಅರಿಯಲು ಪ್ರಯತ್ನಿಸುತ್ತೇವೆ. ಆದರೆ ದೊಡ್ಡ ನಾಯಕರುಗಳು ನಮ್ಮ ಈ ಪ್ರಯತ್ನವನ್ನು ಎಸಿ ಚೇಂಬರ್ ಗಳಲ್ಲಿ ಕುಳಿತು ತಡೆಯುತ್ತಾರೆ" ಎಂದು ಅವರು ಆರೋಪಿಸಿದ್ದಾರೆ.
"ಗುಜರಾತ್ ನಲ್ಲಿ ಕೇವಲ ಹಾರ್ದಿಕ್ ಪಟೇಲ್ ಮಾತ್ರ ಕಾಂಗ್ರೆಸ್ ಕುರಿತು ಕೋಪಗೊಂಡಿರುವುದಲ್ಲ. ಇಲ್ಲಿ ಹಲವಾರು ನಾಯಕರುಗಳು ಕಾಂಗ್ರೆಸ್ ಅನ್ನು ಬಳಸುತ್ತಿದ್ದಾರೆ. ಅಧಿಕಾರದಲ್ಲಿ ಕೂತು ಪಕ್ಷವನ್ನು ಹೊಗಳಿದರೆ ಪಕ್ಷ ಅವರನ್ನು ಸಿಎಂ ಮಾಡುವುದಿಲ್ಲ. ಗುಜರಾತ್ ನಲ್ಲಿ ಪಾಟೀದಾರ್ ಸಮುದಾಯವಾಗಲಿ, ಇತರ ಯಾವುದೇ ಸಮುದಾಯವಾಗಲಿ ಕಾಂಗ್ರೆಸ್ ನೊಳಗೆ ಅವರು ಯಾತನೆ ಅನುಭವಿಸಲೇಬೇಕು. ನೀವು ಸತ್ಯ ಮಾತನಾಡಿದರೆ ಹಿರಿಯ ನಾಯಕರು ನಿಮ್ಮನ್ನು ಅವಮಾನಿಸಲು ಪ್ರಯತ್ನಿಸುತ್ತಾರೆ" ಎಂದು ಅವರು ಹರಿಹಾಯ್ದಿದ್ದಾರೆ.