ಜಮ್ಮುಕಾಶ್ಮೀರ: ವೈನ್ ಶಾಪ್ ಮೇಲೆ ದಾಳಿ ಪ್ರಕರಣ; ನಾಲ್ವರು ಶಂಕಿತ ಉಗ್ರರ ಬಂಧನ
ಶ್ರೀನಗರ, ಮೇ 19: ಬಾರಾಮುಲ್ಲಾದ ವೈನ್ ಶಾಪ್ ಮೇಲೆ ದಾಳಿ ನಡೆದ 48 ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಪ್ರಕರಣ ಬೇಧಿಸಿರುವ ಪೊಲೀಸರು ನಾಲ್ವರು ಶಂಕಿತ ಉಗ್ರರು ಹಾಗೂ ಬಾಹ್ಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಬಾರಾಮುಲ್ಲಾದ ವೈನ್ ಶಾಪ್ ಮೇಲೆ ಗುರುವಾರ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದ ಹಾಗೂ ಮೂವರು ಗಾಯಗೊಂಡಿದ್ದರು. ಲಷ್ಕರೆ ತಯ್ಯಿಬದ ಉಗ್ರರ ಉದ್ದೇಶ ವೈನ್ ಶಾಪ್ ಮೇಲೆ ಮಾತ್ರ ದಾಳಿ ನಡೆಸುವುದು ಅಲ್ಲ. ಬದಲಾಗಿ, ಈ ಪ್ರದೇಶದಲ್ಲಿ ಹಲವು ದಾಳಿ ನಡೆಸುವುದು ಎಂದು ಬಾರಮುಲ್ಲಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ರಯೀಸ್ ಮುಹಮ್ಮದ್ ಭಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಪೊಲೀಸರು 5 ಪಿಸ್ತೂಲ್, 23 ಗ್ರೆನೇಡ್, ಸ್ಫೋಟಕ ಪೊಟ್ಟಣ, 7 ಮ್ಯಾಗಝಿನ್ ಹಾಗೂ 205 ಸುತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ದಾಳಿಗೆ ಬಳಸಲಾದ ಬೈಕ್ ಅನ್ನು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಉಗ್ರರನ್ನು ಶಾಹಿದ್ ಅಹ್ಮದ್ ಬಾಲಾ ಸಫೀರ್ ಮಿರ್, ಮುಹಮ್ಮದ್ ಮರೂಫ್ ಆಲಿಯಾಸ್ ಆದಿಲ್, ಪೈಸಲ್ ಶಬಾನ್ ಹಾಗೂ ಹಾತಿಫ್ ಸೋಫಿ ಎಂದು ಗುರುತಿಸಲಾಗಿದೆ.