"ನನ್ನ ಕುರಿತು ಸುಳ್ಳುಕಥೆಗಳನ್ನು ಹೆಣೆಯಲಾಗುತ್ತಿದೆ": ದಿಲ್ಲಿ ಪೊಲೀಸರಿಗೆ ಆಪ್ ಶಾಸಕ ಅಮಾನತುಲ್ಲಾ ಖಾನ್ ನೋಟಿಸ್
Photo: IANS
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಶನಿವಾರ ಮಾನನಷ್ಟಕ್ಕಾಗಿ ದಿಲ್ಲಿ ಪೊಲೀಸರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ ಹಾಗೂ ಪೊಲೀಸ್ ಸಿಬ್ಬಂದಿ ತನ್ನ ಬಗ್ಗೆ ಸುಳ್ಳು ಕಥೆಗಳನ್ನು ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನುವುದಾಗಿ scroll.in ವರದಿ ಮಾಡಿದೆ.
ಪೊಲೀಸರಿಗೆ ನೀಡಿದ ಕಾನೂನು ನೋಟಿಸ್ನಲ್ಲಿ ಖಾನ್ ಅವರು "ಅನಗತ್ಯ ಕಿರುಕುಳ, ಗಂಭೀರ ದೈಹಿಕ ಹಾಗೂ ಮಾನಸಿಕ ಸಂಕಟವನ್ನು ಉಂಟುಮಾಡುವುದಕ್ಕಾಗಿ ತನಗೆ, ತನ್ನ ಪತ್ನಿ ಹಾಗೂ ಮಕ್ಕಳಿಗೆ "ಬೇಷರತ್, ಲಿಖಿತ, ಸಾರ್ವಜನಿಕ ಕ್ಷಮೆಯಾಚನೆ" ಯನ್ನು ಕೋರಿದ್ದಾರೆ.
ಮೇ 9 ರಂದು ಶಾಹೀನ್ ಬಾಗ್ನಲ್ಲಿ ಧ್ವಂಸ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಓಖ್ಲಾದ ಶಾಸಕ ಖಾನ್ ವಿರುದ್ಧ ದಿಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು(ಎಫ್ ಐಆರ್) ದಾಖಲಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿರುವ ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ಧ ಖಾನ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರದೇಶದಲ್ಲಿ ಯಾವುದೇ ಅಕ್ರಮ ಕಟ್ಟಡಗಳಿಲ್ಲ ಎಂದು ಅವರು ಹೇಳಿದ್ದಾರೆ.
"ದಿಲ್ಲಿ ಪೊಲೀಸರು ನಿರಂತರವಾಗಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಬಾರಿ ದಿಲ್ಲಿ ಪೊಲೀಸರು ನನ್ನ ಪ್ರತಿಷ್ಠೆಯ ಹಕ್ಕು ಹಾಗೂ ನನ್ನ ಕುಟುಂಬದ ಮಾನಹಾನಿ ಜೊತೆಗೆ ಘನತೆಯಿಂದ ಬದುಕುವ ಹಕ್ಕಿನ ಮೇಲೆಯೂ ದಾಳಿ ಮಾಡಿದ್ದಾರೆ" ಎಂದು ಖಾನ್ ರವಿವಾರ ಟ್ವಿಟರ್ ನಲ್ಲಿ ಬರೆದಿದ್ದಾರೆ.
ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ನೀಡಿದ ದೂರಿನ ಆಧಾರದ ಮೇಲೆ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.