ನ್ಯಾಯಾಧೀಶರ ವಿರುದ್ಧವೇ ಆರೋಪ ಮಾಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?
ಹೊಸದಿಲ್ಲಿ: ನ್ಯಾಯಾಧೀಶರನ್ನು ಗುರಿಯಾಗಿಸುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಇದು ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮಾತನಾಡಿ, ದೇಶದಾದ್ಯಂತ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಯುತ್ತಿದ್ದು, ಜಿಲ್ಲಾ ನ್ಯಾಯಾಧೀಶರಿಗೆ ಭದ್ರತೆ ಇಲ್ಲ, ಕೆಲವೊಮ್ಮೆ ಪೊಲೀಸರೂ ಲಾಠಿ ಬೀಸುವುದಿಲ್ಲ (ರಕ್ಷಿಸಲು) ಎಂದು ಹೇಳಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವಕೀಲರೊಬ್ಬರಿಗೆ 15 ದಿನಗಳ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟಿನ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, "ನ್ಯಾಯಾಧೀಶರು ಬಲಶಾಲಿಯಾದಷ್ಟೂ ಆರೋಪಗಳು ಕೆಟ್ಟದಾಗಿರುತ್ತವೆ" ಎಂದು ಹೇಳಿದೆ.
ಜೈಲು ಶಿಕ್ಷೆಯನ್ನು ಎತ್ತಿ ಹಿಡಿದ ನ್ಯಾಯಾಲಯ, ವಕೀಲರು ಕಾನೂನಿಗಿಂತ ಮೇಲಲ್ಲ ಎಂದು ಹೇಳಿದೆ. ನ್ಯಾಯದಾನ ಪ್ರಕ್ರಿಯೆಗೆ ಅಡ್ಡಿಪಡಿಸಲು ಮುಂದಾದರೆ ಅದರ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಆರೋಪಿ ವಕೀಲರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನ್ಯಾಯಾಲಯ, ''ಇಂತಹ ವಕೀಲರು ನ್ಯಾಯಾಂಗ ಪ್ರಕ್ರಿಯೆಗೆ ಕಳಂಕವಾಗಿದ್ದು, ಕಠಿಣವಾಗಿ ವ್ಯವಹರಿಸಬೇಕು'' ಎಂದು ಹೇಳಿದೆ. “ಈ ಮನುಷ್ಯ ಸಂಪೂರ್ಣವಾಗಿ ಕ್ಷಮಿಸಲಾಗದವನು. ಅವರು ಸಂಪೂರ್ಣವಾಗಿ ಅಸಮರ್ಥರಾಗಿರುವ ವಕೀಲರ ವರ್ಗಕ್ಕೆ ಸೇರಿದವರು. ಅವರು ವಕೀಲರ ವೃತ್ತಿಗೆ ಕಳಂಕ.” ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಾಧೀಶರಿಗೆ ಬಹಿರಂಗವಾಗಿ ಬೆದರಿಕೆ ಹಾಕುವುದು ಕೆಲವು ಹೈಕೋರ್ಟ್ಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ ಎಂದು ಹೇಳಿದ್ದಾರೆ.