ಐಎಎಸ್ ಅಧಿಕಾರಿ ಸಾಕುನಾಯಿ ಜೊತೆ ವಾಕಿಂಗ್ ಹೋಗಲು ಸ್ಟೇಡಿಯಂ ಖಾಲಿ ಮಾಡಿಸುತ್ತಿರುವ ಸಿಬ್ಬಂದಿ: ಅಥ್ಲೀಟುಗಳ ಆರೋಪ
ಸಾಂದರ್ಭಿಕ ಚಿತ್ರ (Photo credit:deccanchronicle.com)
ಹೊಸದಿಲ್ಲಿ: ದಿಲ್ಲಿ ಸರಕಾರದ ಅಧೀನದಲ್ಲಿರುವ ತ್ಯಾಗರಾಜ ಸ್ಟೇಡಿಯಂನಲ್ಲಿ ತರಬೇತಿ ಪಡೆಯುವ ಕ್ರೀಡಾಳುಗಳನ್ನು ಸಂಜೆ 7ರೊಳಗೆ ತರಬೇತಿ ಮುಗಿಸುವಂತೆ ಕಳೆದ ಕೆಲ ತಿಂಗಳುಗಳಿಂದ ತಾಕೀತು ಮಾಡಲಾಗುತ್ತಿದೆ ಎಂದು ಅಥ್ಲೀಟುಗಳು ಮತ್ತು ಕೋಚ್ಗಳು ದೂರಿದ್ದಾರೆ. ಐಎಎಸ್ ಅಧಿಕಾರಿ ಹಾಗೂ ದಿಲ್ಲಿಯ ಮುಖ್ಯ ಕಾರ್ಯದರ್ಶಿ (ಕಂದಾಯ) ಸಂಜೀವ್ ಖಿರ್ವಾರ್ ಅವರು ತಮ್ಮ ಸಾಕು ನಾಯಿಯೊಂದಿಗೆ ಈ ಸ್ಟೇಡಿಯಂನಲ್ಲಿ ಸಂಜೆ ಹೊತ್ತು ವಾಕಿಂಗ್ಗಾಗಿ ಆಗಮಿಸುತ್ತಿರುವುದೇ ಕಾರಣ ಎಂದು ಆರೋಪಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
"ಈ ಹಿಂದೆ ರಾತ್ರಿ 8 ರಿಂದ 8.30 ರ ತನಕ ತರಬೇತಿ ಪಡೆಯುತ್ತಿದ್ದೆವು ಈಗ ಹಾಗಾಗುತ್ತಿಲ್ಲ, ಇಲ್ಲಿನ ಭದ್ರತಾ ಸಿಬ್ಬಂದಿ ನಮಗೆ 7 ಗಂಟೆಯೊಳಗೆ ತೆರಳುವಂತೆ ಸೂಚಿಸುತ್ತಾರೆ. ನಮ್ಮ ತರಬೇತಿ ಬಾಧಿತವಾಗುತ್ತಿದೆ,''ಎಂದು ಹಲವಾರು ಅಥ್ಲೀಟುಗಳು ದೂರುತ್ತಿದ್ದಾರೆ ಎಂದು ವರದಿಯಾಗಿದೆ.
ಆದರೆ 1994 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಖಿರ್ವಾರ್ ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಹೇಳುತ್ತಾರೆ. ತಾವು ಕೆಲವೊಮ್ಮೆ ಸ್ಟೇಡಿಯಂನಲ್ಲಿ ತಮ್ಮ ಸಾಕು ನಾಯಿಯೊಂದಿಗೆ ಆಗಮಿಸುವುದಾಗಿ ಅವರು ಹೇಳಿದರೂ ತಮ್ಮಿಂದ ಅಥ್ಲೀಟುಗಳ ತರಬೇತಿಗೆ ತೊಂದರೆಯಾಗಿದೆ ಎಂಬುದನ್ನು ಅವರು ನಿರಾಕರಿಸಿದ್ದಾರೆ.
ಆದರೆ ಸಂಜೆ 6.30-7 ಗಂಟೆಯಾಗುತ್ತಲೇ ಅಲ್ಲಿನ ಭದ್ರತಾ ಸಿಬ್ಬಂದಿ ವಿಸಿಲ್ ಹಾಕುತ್ತಾ ಅಥ್ಲೀಟುಗಳಿಗೆ ತೆರಳಲು ಸಮಯವಾಗುತ್ತಿದೆ ಎಂದು ಸೂಚಿಸುತ್ತಿರುವುದು ಕಂಡು ಬಂದಿದೆ ಎಂದು indianexpress.com ವರದಿ ಮಾಡಿದೆ.
2010 ಕಾಮನ್ವೆಲ್ತ್ ಗೇಮ್ಸ್ಗಾಗಿ ನಿರ್ಮಿತ ಈ ಸ್ಟೇಡಿಯಂ ನಗರದ ಹೃದಯ ಭಾಗದಲ್ಲಿರುವುದರಿಂದ ಹಲವಾರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅಥ್ಲೀಟುಗಳು ಮತ್ತು ಫುಟ್ಬಾಲ್ ಆಟಗಾರರು ಇಲ್ಲಿಗೆ ತರಬೇತಿಗಾಗಿ ಆಗಮಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಲ್ಲಿನ ನಿರ್ವಾಕರಾದ ಅಜಿತ್ ಚೌಧುರಿ, ಸ್ಟೇಡಿಯಂನ ಸಮಯ ಸಂಜೆ 4ರಿಂದ 6 ಆಗಿದೆ ಆದರೆ ಹಗಲಿನ ಸೆಖೆಯ ವಾತಾವರಣ ಪರಿಗಣಿಸಿ ಏಳು ಗಂಟೆ ತನಕ ಅವಕಾಶ ನೀಡಲಾಗುತ್ತಿದೆ ಆದರೆ ಯಾವುದೇ ಸರಕಾರಿ ಅಧಿಕಾರಿ ಈ ಸ್ಟೇಡಿಯಂ ಬಳಸುವ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.
ಮಂಗಳವಾರ ಕೂಡ ಐಎಎಸ್ ಅಧಿಕಾರಿ ಖಿರ್ವಾರ್ ಸ್ಟೇಡಿಯಂನಲ್ಲಿ ಸಂಜೆ 7.30ರ ನಂತರ ತಮ್ಮ ನಾಯಿಯ ಜತೆಗೆ ವಾಕಿಂಗ್ ಹೋಗುತ್ತಿರುವುದು ಕಾಣಿಸಿದೆ.
"ಸ್ಟೇಡಿಯಂ ಮುಚ್ಚುವ ಸಮಯದಲ್ಲಿ ಹೋಗುತ್ತೇನೆ. ನಾಯಿಯನ್ನು ಟ್ರ್ಯಾಕ್ನಲ್ಲಿ ಬಿಡುವುದಿಲ್ಲ, ಆದರೆ ಬೇರೆ ಯಾರೂ ಇಲ್ಲದಾಗ ಬಿಡುತ್ತೇವೆ ಆದರೆ ಯಾವುದೇ ಅಥ್ಲೀಟಿಗೆ ಸ್ಟೇಡಿಯಂ ಬಿಟ್ಟು ತೆರಳುವಂತೆ ಹೇಳಿಲ್ಲ. ಯಾರಿಗಾದರೂ ಆಕ್ಷೇಪವಿದ್ದರೆ ನಾನು ಇಲ್ಲಿ ವಾಕಿಂಗ್ ನಿಲ್ಲಿಸುತ್ತೇನೆ,'' ಎಂದು ಖಿರ್ವಾರ್ ಹೇಳಿದ್ದಾರೆ.
ಆದರೆ ಈಗಾಗಲೇ ಹಲವಾರು ಅಥ್ಲೀಟುಗಳು ಈ ಸ್ಟೇಡಿಯಂನಲ್ಲಿ ತರಬೇತಿ ಪಡೆಯುವ ಬದಲು ಅಲ್ಲಿಂದ 3 ಕಿಮೀ ದೂರವಿರುವ ಕ್ರೀಡಾ ಪ್ರಾಧಿಕಾರದ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಿಲ್ಲಿ ಸರಕಾರದ ಎಲ್ಲಾ ಕ್ರೀಡಾ ಸವಲತ್ತುಗಳು ಅಥ್ಲೀಟುಗಳಿಗೆ ರಾತ್ರಿ 10 ಗಂಟೆ ತನಕ ತೆರೆದಿರಬೇಕೆಂದು ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.