ದೇಶದಲ್ಲಿ ತೀವ್ರ ಕಲ್ಲಿದ್ದಲು ಅಭಾವ, ವಿದ್ಯುತ್ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ; ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶ ಮಂದಿನ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಅವಧಿಯಲ್ಲಿ ತೀವ್ರ ಕಲ್ಲಿದ್ದಲು ಅಭಾವ ಎದುರಿಸುವ ಸಾಧ್ಯತೆ ಇದ್ದು, ವಿದ್ಯುತ್ ಬೇಡಿಕೆ ಹೆಚ್ಚಳದಿಂದ ದೇಶದ ವಿದ್ಯುತ್ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವಿದ್ಯುತ್ ಸಚಿವಾಲಯದ ಅಂಕಿ ಅಂಶಗಳನ್ನು ವಿಶ್ಲೇಷಿಸಿ Reuters ವರದಿ ಮಾಡಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸ್ಥಳೀಯ ಸರಬರಾಜು ಬೇಡಿಕೆಗಿಂತ 42.5 ದಶಲಕ್ಷ ಟನ್ ಕಡಿಮೆಯಾಗಲಿದ್ದು, ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ಶೇಕಡ 15ರಷ್ಟು ಕೊರತೆ ಹೆಚ್ಚಲಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಮತ್ತು ಕೆಲ ಗಣಿಗಳಲ್ಲಿ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉಲ್ಬಣಿಸಲಿದೆ.
38 ವರ್ಷಗಳಲ್ಲೇ ಗರಿಷ್ಠ ವೇಗದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದು, ಜಾಗತಿಕ ಕಲ್ಲಿದ್ದಲು ದರ ಕೂಡಾ ಅತ್ಯಧಿಕವಾಗಿವೆ. ರಷ್ಯಾ- ಉಕ್ರೇನ್ ಸಂಘರ್ಷದಿಂದಾಗಿ ಪೂರೈಕೆಯಲ್ಲೂ ವ್ಯತ್ಯಯವಾಗಿರುವುದು ಈ ಸ್ಥಿತಿಗೆ ಕಾರಣ ಎನ್ನಲಾಗಿದೆ.
ಏತನ್ಮಧ್ಯೆ ಭಾರತ ಸರ್ಕಾರ ಕಲ್ಲಿದ್ದಲು ಬಳಕೆದಾರರು ಅಮದು ಹೆಚ್ಚಿಸಿಕೊಳ್ಳುವಂತೆ ಸೂಚನೆ ನೀಡಿದೆ. ದೇಶೀಯವಾಗಿ ಪೂರೈಕೆಯಾಗುವ ಕಲ್ಲಿದ್ದಲು ಕಡಿತಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.