ಬಿಜೆಪಿಗೆ ಸೇರ್ಪಡೆಯಾದ ಐವರು ಕಾಂಗ್ರೆಸ್ ನಾಯಕರಿಗೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿನಂದನೆ
Photo:PTI
ಹೊಸದಿಲ್ಲಿ: ಬಿಜೆಪಿಗೆ ಸೇರ್ಪಡೆಗೊಂಡಿರುವ ಐವರು ಕಾಂಗ್ರೆಸ್ ನಾಯಕರನ್ನು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಭಿನಂದಿಸಿದ್ದಾರೆ.
ಐವರು ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಸಚಿವರುಗಳಾದ ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಸುಂದರ್ ಶಾಮ್ ಅರೋರಾ, ಗುರ್ಪ್ರೀತ್ ಸಿಂಗ್ ಕಂಗರ್ ಹಾಗೂ ಕೇವಲ್ ಧಿಲ್ಲೋನ್ ಶನಿವಾರ ಬಿಜೆಪಿಗೆ ಸೇರ್ಪಡೆಯಾದರು.
"ಬಲಬೀರ್ ಎಸ್. ಸಿಧು, ಗುರುಪ್ರೀತ್ ಎಸ್. ಕಂಗರ್, ಡಾ. ರಾಜ್ ಕುಮಾರ್ ವರ್ಕಾ, ಸುಂದರ್ ಶಾಮ್ ಅರೋರಾ ಹಾಗೂ ಕೇವಲ್ ಸಿಂಗ್ ಧಿಲ್ಲೋನ್ ಅವರು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದಕ್ಕಾಗಿ ಹಾಗೂ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನ್ನ ಶುಭಾಶಯಗಳು'' ಎಂದು ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಥವಾ ಎಎಪಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೇರಿದೆ.
ಪಂಜಾಬ್ ಚುನಾವಣೆಗೆ ತಿಂಗಳ ಮುಂಚೆ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಗಾಂಧಿಯವರನ್ನೇ ಹೊಣೆಗಾರರನ್ನಾಗಿಸಿದ್ದಾರೆ.
ಅಮರಿಂದರ್ ಸಿಂಗ್ ಅವರು ಪಂಜಾಬ್ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೊದಲು ಕಾಂಗ್ರೆಸ್ ಸುಸ್ಥಿತಿಯಲ್ಲಿತ್ತು.