ದ್ವೇಷಭಾಷಣ; ವಿವಾದಾತ್ಮಕ ಯತಿ ನರಸಿಂಗಾನಂದಗೆ ಗೃಹಬಂಧನ
ನರಸಿಂಗಾನಂದ
ಗಾಝಿಯಾಬಾದ್: ದೆಹಲಿಯ ಜಾಮಾ ಮಸೀದಿಗೆ ಭೇಟಿ ನೀಡುವುದಾಗಿ ಘೋಷಿಸಿದ ಇಲ್ಲಿನ ದಾಸ್ನದೇವಿ ದೇವಾಲಯದ ವಿವಾದಾತ್ಮಕ ಯತಿ ನರಸಿಂಗಾನಂದ ಸರಸ್ವತಿಯನ್ನು ಶುಕ್ರವಾರ ಗೃಹಬಂಧನದಲ್ಲಿ ಇರಿಸಲಾಯಿತು.
ಜೂನ್ 17ರಂದು ಮಸೀದಿಗೆ ಭೇಟಿ ನೀಡಿ ಖುರಾನ್ ಬಗ್ಗೆ ಪ್ರಸ್ತುತಿ ನೀಡುವುದಾಗಿ ಈತ ಘೋಷಿಸಿದ್ದ. ಗಾಝಿಯಾಬಾದ್ ಆಡಳಿತ ಆತನಿಗೆ ನೋಟಿಸ್ ನೀಡಿ, ಕೋಮುದ್ವೇಷ ಹರಡುವ ಹೇಳಿಕೆ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಲಯದ ಎಸ್ಡಿಎಂ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಮಧ್ಯರಾತ್ರಿವರೆಗೂ ನರಸಿಂಗಾನಂದ ಚಲನ ವಲನಗಳ ಮೇಲೆ ತೀವ್ರ ನಿಗಾ ಇಡಲಾಗಿತ್ತು ಎಂದು ಅವರು ಹೇಳಿದ್ದಾರೆ. ನರಸಿಂಗಾನಂದನ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
"ಮುಸ್ಲಿಮರು ರಸ್ತೆಯಲ್ಲಿ ನಿರ್ಭೀತಿಯಿಂದ ಅಡ್ಡಾಡುತ್ತಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಹಿಂಸೆ ಹರಡುತ್ತಿದೆ ಹಾಗೂ ಮುಸ್ಲಿಂ ಮುಖಂಡರು ಹಿಂದೂಗಳ ಶಿರಚ್ಛೇದಕ್ಕಾಗಿ ಫತ್ವಾ ಹೊರಡಿಸುತ್ತಿದ್ದಾರೆ" ಎಂದು ವೀಡಿಯೊದಲ್ಲಿ ಹೇಳಲಾಗಿದೆ.