ಪ್ರವಾದಿ ಕುರಿತ ನೂಪುರ್ ಶರ್ಮಾ ಹೇಳಿಕೆ ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ ಬಂಗಾಳ ವಿಧಾನಸಭೆ
ಕೋಲ್ಕತಾ: ಪ್ರವಾದಿ ಮುಹಮ್ಮದ್ ರವರ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಬಂಗಾಳ ವಿಧಾನಸಭೆ ಸೋಮವಾರ ಅಂಗೀಕರಿಸಿತು.
ಪ್ರವಾದಿ ಮುಹಮ್ಮದ್ ರ ಕುರಿತು ಶರ್ಮಾ ಹೇಳಿಕೆಯನ್ನು ಖಂಡಿಸಿ ರಾಜ್ಯ ಸರಕಾರ ನಿರ್ಣಯವನ್ನು ಅಂಗೀಕರಿಸಿದಾಗ ಬಿಜೆಪಿ ನಾಯಕರು ಸದನದಿಂದ ಹೊರ ನಡೆದರು.
ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಹಾಗೂ ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದಂತೆ ಏಳು ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳದ ಶಾಸಕಾಂಗ ಸಭೆಯಿಂದ ಅಮಾನತುಗೊಳಿಸಿದ ಕೇವಲ ನಾಲ್ಕು ದಿನಗಳ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದೀಗ ಅಮಾನತು ಹಿಂಪಡೆಯಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸುವೆಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಆರಂಭಿಸಿದರು.
"ರಾಜ್ಯದಲ್ಲಿ ಹಿಂಸಾಚಾರ ನಡೆದಾಗ ನಾವು ಕ್ರಮ ಕೈಗೊಂಡಿದ್ದೇವೆ. ಆದರೆ ಈ ಮಹಿಳೆಯನ್ನು (ನೂಪುರ್ ಶರ್ಮಾ) ಇನ್ನೂ ಬಂಧಿಸಲಾಗಿಲ್ಲ ಏಕೆ? ಆಕೆಯನ್ನು ಬಂಧಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆಕೆ ಕೋಲ್ಕತ್ತಾ ಪೊಲೀಸರಿಂದ ನಾಲ್ಕು ವಾರಗಳ ಕಾಲ ಸಮಯ ಕೋರಿದ್ದಾರೆ. ಆಕೆ ಇಂದು ಪೊಲೀಸರ ಮುಂದೆ ಹಾಜರಾಗಬೇಕಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.