ಬುಲ್ಡೋಝರ್ ಪ್ರಕ್ರಿಯೆಗಳು ಕಾನೂನಿನ ಪ್ರಕಾರವೇ ನಡೆದಿದೆ: ಸುಪ್ರೀಂ ನೋಟಿಸ್ಗೆ ಉತ್ತರ ಪ್ರದೇಶ ಸರ್ಕಾರ ಉತ್ತರ
Photo: Twitter/@MrityunjayUP
ಹೊಸದಿಲ್ಲಿ: ಪ್ರವಾದಿ ಮಹಮ್ಮದ್ ವಿರುದ್ಧ ಬಿಜೆಪಿ ನಾಯಕರು ನೀಡಿದ ನಿಂದನಾತ್ಮಕ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯ ನಂತರ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳ ಮನೆಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಧ್ವಂಸ ಕಾರ್ಯಾಚರಣೆಗಳು ಕಾನೂನಿಗೆ ಅನುಸಾರವಾಗಿವೆ ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಜಮೀಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನೋಟಿಸ್ಗೆ ಪ್ರತಿಕ್ರಿಯೆ ನೀಡಿದ ಆದಿತ್ಯನಾಥ್ ಸರ್ಕಾರ, ʼʼಧ್ವಂಸ ಪ್ರಕ್ರಿಯೆ ಮತ್ತು ಅಂತಹ ಕ್ರಮಗಳು ಸಾಕಷ್ಟು ಸೂಚನೆಯ ನಂತರ ಮಾತ್ರ ಮಾಡಲಾಗುತ್ತದೆʼʼ ಎಂದು ಹೇಳಿದೆ. ಜಮೀಯತ್ ಉಲಮಾ-ಇ-ಹಿಂದ್ ಸಲ್ಲಿಸಿದ ಮನವಿಯಲ್ಲಿ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೋರಲಾಗಿತ್ತು.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರು, "ಕಾನೂನಿಗೆ ಅನುಸಾರವಾಗಿ ಹೊರತುಪಡಿಸಿ" ಕೆಡವುವ ಚಟುವಟಿಕೆಗಳನ್ನು ಕೈಗೊಳ್ಳದಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದಾರೆ ಮತ್ತು ಸರ್ಕಾರದ ಇತ್ತೀಚಿನ ಕ್ರಮಗಳು ಹಾಗೂ ಕಾರ್ಯವಿಧಾನಗಳು ಕಾನೂನುಗಳನ್ನು ಹೇಗೆ ಅನುಸರಿಸಿವೆ ಎಂಬುದನ್ನು ತೋರಿಸುವಂತೆಯೂ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಬುಲ್ಡೋಝರ್ ಕ್ರಮವು ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ, 1973 ರ ಅನುಸಾರವಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ವಾದಿಸಿದೆ.