ತ್ರಿಪುರಾ ಉಪಚುನಾವಣೆ: ಬಿಜೆಪಿಗೆ ಮೂರು ಸ್ಥಾನಗಳು, ಕಾಂಗ್ರೆಸ್ಗೆ ಒಂದು ಸ್ಥಾನ
ಅಗರ್ತಲಾ, ಜೂ. 26: ತ್ರಿಪುರಾ ವಿಧಾನಸಭೆಗೆ ಜೂ. 23ರಂದು ನಡೆದಿದ್ದ ಉಪಚುನಾವಣೆಗಳ ಫಲಿತಾಂಶಗಳು ರವಿವಾರ ಪ್ರಕಟಗೊಂಡಿದ್ದು, ಆಡಳಿತಾರೂಢ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಬರ್ದೊವಾಲಿ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು,ತನ್ನ ನಿಕಟ ಎದುರಾಳಿ ಕಾಂಗ್ರೆಸ್ನ ಆಶಿಷ ಕುಮಾರ ಸಹಾ ಅವರನ್ನು 6,104 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಸ್ವಪ್ನಾ ದಾಸ್ ಮತ್ತು ಮಾಲಿನಾ ದೇಬನಾಥ ಅವರು ಕ್ರಮವಾಗಿ ಸುರ್ಮಾ ಮತ್ತು ಯುವರಾಜನಗರ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೆ,ಅಗರ್ತಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಸುದೀಪ ರಾಯ್ ಬರ್ಮನ್ ಅವರು ವಿಧಾನಸಭೆಯಲ್ಲಿ ಕಾಂಗ್ರೆಸ್ನ ಏಕೈಕ ಶಾಸಕರಾಗಿ ಹೊರಹೊಮ್ಮಿದ್ದಾರೆ. 2018ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚಿತ್ತು.
ಸಿಪಿಎಂ ತನ್ನ ಭದ್ರಕೋಟೆಯಾಗಿದ್ದ ಯುವರಾಜನಗರವನ್ನು ಕಳೆದುಕೊಂಡಿದ್ದರೆ,ಉಪಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಟಿಎಂಸಿಯ ಎಲ್ಲ ಅಭ್ಯರ್ಥಿಗಳು ಠೇವಣಿಗಳನ್ನು ಕಳೆದುಕೊಂಡಿದ್ದಾರೆ.