ಭಾರತೀಯ ಕಾಲೇಜುಗಳಲ್ಲಿ ಪ್ರವೇಶ ಕೋರಿ ಉಕ್ರೇನ್ನಿಂದ ಸ್ಥಳಾಂತರಿತ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ
File Photo (PTI)
ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವೈದ್ಯ ವಿದ್ಯಾರ್ಥಿಗಳು, ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಆಗ್ರಹಿಸಿ ರವಿವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುಮಾರು 12 ಸಾವಿರ ವಿದ್ಯಾರ್ಥಿಗಳು ಉಕ್ರೇನ್ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ದೇಶದಲ್ಲಿ ಕನಿಷ್ಠ 600 ವೈದ್ಯ ಕಾಲೇಜುಗಳಿದ್ದು, ಪ್ರತಿ ಸಂಸ್ಥೆ ಕೇವಲ 20 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸುಮಾರು 350 ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಈ ಪೈಕಿ 35 ಮಂದಿ ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಹಿಮಾಚಲನ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದವರಾಗಿದ್ದು, ಇವರು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು ಎಂದು ಪೇರೆಂಟ್ಸ್ ಅಸೋಸಿಯೇಶನ್ ಆಫ್ ಉಕ್ರೇನ್ ಮೆಡಿಕಲ್ ಸ್ಟೂಡೆಂಟ್ಸ್ ಅಧ್ಯಕ್ಷ ಆರ್.ಬಿ.ಗುಪ್ತಾ ಹೇಳಿದ್ದಾರೆ.
ನಾವು ಜಂತರ್ ಮಂತರ್ನಲ್ಲಿ ಜಾಥಾ ಕೂಡಾ ನಡಸಿದ್ದು, ಈ ವಿದ್ಯಾರ್ಥಿಗಳನ್ನು ಭಾರತೀಯ ಕಾಲೇಜುಗಳಿಗೆ ಸೇರಿಸಲು ಸರ್ಕಾರ ನೆರವಾಗಬೇಕು. ಸರ್ಕಾರ ಒಂದು ಬಾರಿಯ ಕ್ರಮವಾಗಿ ಈ ಮಕ್ಕಳನ್ನು ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
"ಸುಮಾರು 15 ರಿಂದ 16 ಸಾವಿರ ವೈದ್ಯ ವಿದ್ಯಾರ್ಥಿಗಳು ಉಕ್ರೇನ್ನಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಈ ಪೈಕಿ ಅಂತಿಮ ವರ್ಷದ 3000 ವಿದ್ಯಾರ್ಥಿಗಳು ಭಾರತದಲ್ಲಿ ತಮ್ಮ ಇಂಟರ್ನ್ಶಿಪ್ ಪೂರ್ಣಗೊಳಿಸಲು ಎನ್ಎಂಸಿ ಅವಕಾಶ ನೀಡಿದೆ. ಇದೀಗ 12 ಸಾವಿರ ವಿದ್ಯಾರ್ಥಿಗಳು ಉಳಿದಿದ್ದಾರೆ. ಈ ಮಕ್ಕಳಿಗೆ ಪ್ರವೇಶ ನೀಡಬೇಕು" ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.