ಬಹುಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲರ ಆದೇಶ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಉದ್ಧವ್ ಠಾಕ್ರೆ
Photo:PTI
ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತುಪಡಿಸಬೇಕೆಂಬ ರಾಜ್ಯಪಾಲರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ತಂಡವು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು NDTV ವರದಿ ಮಾಡಿದೆ.
16 ಬಂಡಾಯ ಶಾಸಕರು ಸಂಭವನೀಯ ಅನರ್ಹತೆಗೆ ಇನ್ನೂ ಪ್ರತಿಕ್ರಿಯಿಸದ ಕಾರಣ ರಾಜ್ಯಪಾಲರ ಬಹುಮತ ಸಾಬೀತುಪಡಿಸಬೇಕೆಂಬ ಕೋರಿಕೆ ಕಾನೂನುಬಾಹಿರ ಎಂದು ಆರೋಪಿಸಿ ಠಾಕ್ರೆ ತಂಡವು ಸುಪ್ರೀಂಕೋರ್ಟ್ಗೆ ಮೊರೆ ಹೋಗಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ವಿಶ್ವಾಸಮತ ಯಾಚನೆಗೆ ಠಾಕ್ರೆ ಸರಕಾರಕ್ಕೆ ಸೂಚಿಸುವಂತೆ ಒತ್ತಾಯಿಸಿದ್ದರು.
ಬಹುಮತ ಸಾಬೀತುಪಡಿಬೇಕೆಂಬ ರಾಜ್ಯಪಾಲರ ಬೇಡಿಕೆಯ ವಿರುದ್ಧ ಶಿವಸೇನೆ ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ಸಂಸದ ಸಂಜಯ್ ರಾವುತ್ ಮಂಗಳವಾರ ಬೆಳಿಗ್ಗೆ ಹೇಳಿದ್ದಾರೆ.
"16 ಶಾಸಕರ ಅನರ್ಹತೆ ವಿಚಾರವನ್ನು ಸುಪ್ರೀಂಕೋರ್ಟ್ ಜುಲೈ 11 ರವರೆಗೆ ಮುಂದೂಡಿರುವಾಗ ಬಹುಮತ ಸಾಬೀತುಪಡಿಸುವಂತೆ ಕೇಳಲು ಹೇಗೆ ಸಾಧ್ಯ? ಈ ಶಾಸಕರ ಅನರ್ಹತೆಯ ಸ್ಥಿತಿಯನ್ನು ಇನ್ನೂ ನಿರ್ಧರಿಸದ ಕಾರಣ ಅವರು ಬಹುಮತ ಸಾಬೀತಿಗೆ ಹಾಜರಾಗಲು ಹೇಗೆ ಸಾಧ್ಯ? ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
"ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ಅಂತಿಮ ವಿಚಾರಣೆ ನಡೆಯದಿದ್ದರೂ ವಿಶ್ವಾಸಮತ ಯಾಚನೆ ಪರೀಕ್ಷೆಯನ್ನು ನಡೆಸಿದರೆ ಇದು ನ್ಯಾಯಾಲಯದ ನಿಂದನೆ ಪ್ರಕ್ರಿಯೆಯಾಗುತ್ತದೆ" ಎಂದು ಅವರು ಹೇಳಿದರು.