ಅತಂತ್ರ ಸ್ಥಿತಿಯಲ್ಲಿರುವ ನಡುವೆಯೇ ಎರಡು ನಗರಗಳ ಹೆಸರು ಬದಲಿಸಿದ ಮಹಾರಾಷ್ಟ್ರ ಸರಕಾರ
ಉದ್ಧವ್ ಠಾಕ್ರೆ (PTI)
ಮುಂಬೈ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ತನ್ನ ಮೇಲೆ ತೂಗುಗತ್ತಿ ತೂಗಾಡುತ್ತಿರುವ ನಡುವೆಯೇ, ಇಂದು ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ. ಆ ಮೂಲಕ ಮರಾಠ ಪರಂಪರೆಯ ನಿಜವಾದ ವಾರಸುದಾರರು ಎಂದು ಶಿವಸೇನೆಯು ತನ್ನನ್ನು ತಾನು ಬಿಂಬಿಸಲು ಪ್ರಯತ್ನಪಡುತ್ತಿದೆ, ಈ ಕಾರಣಕ್ಕಾಗಿಯೇ ಛತ್ರಪತಿ ಶಿವಾಜಿಯ ಹಿರಿಯ ಪುತ್ರ ಸಂಭಾಜಿಯ ಹೆಸರನ್ನು ನಾಮಕಾರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ndtv.com ವರದಿ ಮಾಡಿದೆ.
17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈ ಪ್ರದೇಶದ ಗವರ್ನರ್ ಆಗಿದ್ದಾಗ ಈ ಪ್ರದೇಶಕ್ಕೆ ಔರಂಗಾಬಾದ್ ಎಂದು ಹೆಸರಿಡಲಾಗಿತ್ತು. ಸಂಭಾಜಿ ಹೆಸರನ್ನು ಮರುನಾಮಕರಣ ಮಾಡುವುದು ಶಿವಸೇನೆಯ ಬಹುದಿನಗಳ ಬೇಡಿಕೆಯಾಗಿತ್ತು.
ಔರಂಗಾಬಾದ್ ಮಾತ್ರವಲ್ಲದೆ, ಒಸ್ಮಾನಾಬಾದ್ ನಗರವನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಕ್ಯಾಬಿನೆಟ್ ಅನುಮೋದಿಸಿದೆ. ಅದರೊಂದಿಗೆ ನವಿ ಮುಂಬೈನ ಹೊಸ ವಿಮಾನ ನಿಲ್ದಾಣಕ್ಕೆ ಡಿಬಿ ಪಾಟಿಲ್ ಹೆಸರಿಡಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ವರದಿಯಾಗಿದೆ.