ಮಹಾ ತಿರುವು: ಮಹಾರಾಷ್ಟ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಏಕನಾಥ್ ಶಿಂಧೆ
ಸರಕಾರದ ಭಾಗವಾಗುವುದಿಲ್ಲ ಎಂದ ಫಡ್ನವೀಸ್ ಘೋಷಣೆ
Photo: Twitter/@ANI
ಮುಂಬೈ: ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಗಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಇಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ತಾವು ಸರಕಾರದ ಭಾಗವಾಗುವುದಿಲ್ಲ, ಬದಲು ಬಾಹ್ಯ ಬೆಂಬಲ ನೀಡುವುದಾಗಿಯೂ ಫಡ್ನವೀಸ್ ಘೋಷಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಬಂಡಾಯ ಶಾಸಕರಲ್ಲೊಬ್ಬರನ್ನು ಸಿಎಂ ಆಗಿ ಬಿಜೆಪಿ ಮಾಡುವುದೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಇದಿರೇಟು ಎಂಬಂತೆ ಬಂಡಾಯವೆದ್ದ ಶಾಸಕರ ನಾಯಕ ಶಿಂಧೆ ಅವರೇ ಮುಖ್ಯಮಂತ್ರಿ ಎಂದು ಇಂದು ಫಡ್ನವೀಸ್ ಘೋಷಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರ ನಿರ್ಧಾರದ ವಿರುದ್ಧ ಹೋಗಿದ್ದ ಉದ್ಧವ್ ಠಾಕ್ರೆ ಪ್ರತಿನಿತ್ಯವೆಂಬಂತೆ ಹಿಂದುತ್ವವನ್ನು ಅವಮಾನಿಸುತ್ತಿದ್ದರು ಎಂದು ಫಡ್ನವೀಸ್ ಹೇಳಿದ್ದಾರೆ.
"ಒಟ್ಟು 288 ಸದಸ್ಯರ ಸದನದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 161 ಸ್ಥಾನಗಳನ್ನು ಗಳಿಸಿತ್ತು, ಈ ಮೈತ್ರಿಕೂಟವೇ ಸರಕಾರ ರಚಿಸುವುದೆಂದೇ ನಿರೀಕ್ಷಿಸಲಾಗಿತ್ತು, ಆದರೆ ಉದ್ಧವ್ ಠಾಕ್ರೆ ಜನರ ಬಯಕೆಗೆ ವಿರುದ್ಧವಾಗಿ ವರ್ತಿಸಿದರು,'' ಎಂದು ಫಡ್ನವೀಸ್ ಹೇಳಿದ್ದಾರೆ.