ಮಹಾರಾಷ್ಟ್ರ: ಇಂಧನ ಮೇಲಿನ ವ್ಯಾಟ್ ಕಡಿತಗೊಳಿಸಿದ ಏಕನಾಥ್ ಶಿಂಧೆ ಸರ್ಕಾರ
ಮುಂಬೈ, ಜು. 4: ತೈಲದ ಮೇಲಿನ ವ್ಯಾಟ್ ಅನ್ನು ಮಹಾರಾಷ್ಟ್ರ ಸರಕಾರ ಕಡಿತಗೊಳಿಸಲಿದೆ. ಇದು ರಾಜ್ಯದಲ್ಲಿ ತೈಲ ಬೆಲೆಯನ್ನು ಪರಿಣಾಮಕಾರಿ ಇಳಿಕೆ ಮಾಡಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಸೋಮವಾರ ಹೇಳಿದ್ದಾರೆ.
ನೂತನ ಸಂಪುಟದ ಮುಂದಿನ ಸಭೆಯ ಬಳಿಕ ವ್ಯಾಟ್ ಕಡಿತ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ತೈಲ ಬೆಲೆ ಇಳಿಕೆ ಮಾಡಿದ್ದರೆ, ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳು ಹಾಗೆ ಮಾಡಲು ಸಿದ್ಧವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಅನುಕ್ರಮವಾಗಿ ರೂ. 5 ಹಾಗೂ ರೂ. 10 ಇಳಿಕೆ ಮಾಡಿತ್ತು. ಬಿಜೆಪಿ ಆಡಳಿತ ಇರುವ ಬಹುತೇಕ ರಾಜ್ಯಗಳು ವ್ಯಾಟ್ನಲ್ಲಿ ಕೂಡ ಕಡಿತ ಮಾಡಿತ್ತು.
ಕೇಂದ್ರ ಸರಕಾರ ಮತ್ತೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದಂತೆ ಉತ್ತರಪ್ರದೇಶದಂತಹ ರಾಜ್ಯಗಳು ಮೇಯಲ್ಲಿ ಮತ್ತೆ ವ್ಯಾಟ್ ಅನ್ನು ಇನ್ನಷ್ಟು ಕಡಿತಗೊಳಿಸಲಿವೆ.
ಆದರೆ, ಜನರಿಗೆ ಪರಿಹಾರ ನೀಡುವ ಕ್ರಮವಾಗಿ ತೈಲದ ಮೇಲಿನ ವ್ಯಾಟ್ ಕಡಿತಗೊಳಿಸುವ ಪ್ರಧಾನಿ ಅವರ ಸಲಹೆಯನ್ನು ಪ್ರತಿಪಕ್ಷ ಆಡಳಿತ ಇರುವ ರಾಜ್ಯಗಳು ತಿರಸ್ಕರಿಸಿವೆ. ಈ ಹಿಂದೆ ಕೂಡ ಈ ರಾಜ್ಯಗಳು ನಿರಾಕರಿಸಿದ್ದವು. ಇದು ತಮ್ಮ ಆದಾಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಅವು ಹೇಳಿವೆ.