ಅಮರನಾಥ ಮೇಘ ಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ
"ಯಾತ್ರೆಯನ್ನು ತಕ್ಷಣದಿಂದ ರದ್ದುಪಡಿಸಲಾಗಿದೆ"
ಶ್ರೀನಗರ: ಅಮರನಾಥ ಗುಹಾ ದೇವಾಲಯದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಮೇಘ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೇರಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ ಎಂದು timesofindia.com ವರದಿ ಮಾಡಿದೆ.
ಬೇಸ್ಕ್ಯಾಂಪ್ ಬಲ್ಟಾಲ್ನಲ್ಲಿ ಮೇಘಸ್ಫೋಟದಿಂದಾಗಿ ನೆರೆ ನೀರಿಗೆ ಮೂರು ಸಮುದಾಯ ಪಾಕಶಾಲೆಗಳು ಮತ್ತು 25 ಡೇರೆಗಳು ಕೊಚ್ಚಿಕೊಂಡು ಹೋಗಿವೆ. ಕೊರೋನ ವೈರಸ್ ಸಾಂಕ್ರಾಮಿಕದಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಈ ವರ್ಷದ ಬೇಸಿಗೆಯಲ್ಲಷ್ಟೇ ಆರಂಭವಾಗಿತ್ತು.
ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜಮ್ಮು ಪ್ರದೇಶದಲ್ಲಿ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ಕನಿಷ್ಠ ಮೂವರು ಶುಕ್ರವಾರ ಮೃತಪಟ್ಟಿದ್ದಾರೆ.
ಎನ್ಡಿಆರ್ಎಫ್, ಎಸ್ಡಿಆರ್ಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಘಟಕಗಳು ಬೇಸ್ಕ್ಯಾಫ್ಗೆ ಧಾವಿಸಿದ್ದು, ಸಮರೋಪಾದಿ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಮಳೆ ನಿಂತ ಬಳಿಕ ಅವಶೇಷಗಳ ಗುಡ್ಡಗಳಡಿ ಸಿಕ್ಕಿಹಾಕಿಕೊಂಡಿರುವವರ ತೆರವಿಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ದುರಂತದಲ್ಲಿ ಉಳಿದವರಿಗಾಗಿ ಮತ್ತು ಮೃತದೇಹಗಳಿಗೆ ಶೋಧ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್ಗಳನ್ನು ಬಳಸಲಾಗುತ್ತಿದೆ.
ಇದುವರೆಗೆ ಐದು ದೇಹಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ ಮೂವರು ಮಹಿಳೆಯರು ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಹೇಳಿದ್ದಾರೆ. ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಯಾತ್ರೆಯನ್ನು ತಕ್ಷಣದಿಂದ ರದ್ದುಪಡಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ಮುಗಿದ ಬಳಿಕ ಯಾತ್ರೆ ಪುನರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.