ಮ್ಯಾನ್ಮಾರ್ನ ಸಾವಿರಾರು ಮಂದಿ ನಿರಾಶ್ರಿತರು ಆಸರೆ ಕೋರಿ ಬರುತ್ತಿದ್ದಾರೆ: ಮಿಝೋರಾಂ ಹಿರಿಯ ಅಧಿಕಾರಿ
ಐಜ್ವಾಲ್: ನೆರೆರಾಷ್ಟ್ರವಾದ ಮ್ಯಾನ್ಮಾರ್ನ ಚಿನ್ ರಾಜ್ಯದಲ್ಲಿ ಸಂಘರ್ಷ ಮುಂದುವರಿದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ನಿರಾಶ್ರಿತರು ಮಿಝೋರಾಂನಲ್ಲಿ ಆಸರೆ ಕೋರಿ ಬರುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಮ್ಯಾನ್ಮಾರ್ ಸೇನೆ ಕಳೆದ ವರ್ಷದ ಫೆಬ್ರುವರಿ 1ರಂದು ದೇಶದಲ್ಲಿ ಅಧಿಕಾರದ ಸೂತ್ರ ಹಿಡಿದ ಬಳಿಕ 2022ರ ಜುಲೈ 9ರವರೆಗೆ 30,316 ಮಂದಿ ಮ್ಯಾನ್ಮಾರ್ ಪ್ರಜೆಗಳು ರಾಜ್ಯದ ವಿವಿಧೆಡೆ ಆಸರೆ ಪಡೆದಿದ್ದಾರೆ ಎಂದು ರಾಜ್ಯದ ಗೃಹ ಇಲಾಖೆ ರವಿವಾರ ಹೇಳಿದೆ. ಈ ಪೈಕಿ 11,798 ಮಕ್ಕಳು ಹಾಗೂ 10,047 ಮಹಿಳೆಯರು ಸೇರಿದ್ದಾರೆ ಎಂದು ವಿವರಿಸಿದೆ.
ಮಿಝೋರಾಂನಲ್ಲಿ ಆಸರೆ ಪಡೆದವರಲ್ಲಿ 14 ಮಂದಿ ಮ್ಯಾನ್ಮಾರ್ ಸಂಸದರೂ ಸೇರಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 30,316 ಮಂದಿಯ ಪೈಕಿ 30,299 ಮಂದಿಯ ವಿವರಗಳನ್ನು ಸಂಗ್ರಹಿಸಲಾಗಿದ್ದು, 30,083 ಮಂದಿಗೆ ರಾಜ್ಯ ಸರ್ಕಾರದಿಂದ ಗುರುತಿನ ಚೀಟಿ ವಿತರಿಸಲಾಗುತ್ತಿದೆ ಎಂದು ಅವರು ವಿವರ ನೀಡಿದ್ದಾರೆ.
ಈ ಗುರುತಿನ ಚೀಟಿಗಳನ್ನು ಕೇವಲ ರಾಜ್ಯದಲ್ಲಿ ಆಶ್ರಯ ಪಡೆದಿರುವವರನ್ನು ಗುರುತಿಸುವ ಉದ್ದೇಶದಿಂದ ನೀಡಲಾಗುತ್ತಿದೆಯೇ ವಿನಃ ಇದು ರಾಜ್ಯ ಸರ್ಕಾರದ ಯೋಜನೆಗಳಿಗೆ ಸಿಂಧುವಲ್ಲ. ಈ ಐಡಿ ಕಾರ್ಡ್ ಕೇವಲ ಮಿಝೋರಾಂನಲ್ಲಿ ಮಾತ್ರ ಮಾನ್ಯತೆ ಹೊಂದಿರುತ್ತವೆ ಎಂದು ಸ್ಪಷ್ಟಪಡಿಸಿರುವುದಾಗಿ hindustantimes.com ವರದಿ ಮಾಡಿದೆ.